ADVERTISEMENT

ಮಡಿಕೇರಿ: ಅಸುರರ ಸಂಹಾರ ನೋಡಲು ಬನ್ನಿ

ದುಷ್ಟ ಸಂಹಾರ ಕಥಾ ವಸ್ತು ಆಯ್ದುಕೊಂಡ ಚೌಡೇಶ್ವರಿ ದೇಗುಲ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಸಮಿತಿ

ಕೆ.ಎಸ್.ಗಿರೀಶ್
Published 28 ಸೆಪ್ಟೆಂಬರ್ 2022, 19:30 IST
Last Updated 28 ಸೆಪ್ಟೆಂಬರ್ 2022, 19:30 IST
ಮಹದೇವಪೇಟೆಯ ಚೌಡೇಶ್ವರಿ ದೇಗುಲ
ಮಹದೇವಪೇಟೆಯ ಚೌಡೇಶ್ವರಿ ದೇಗುಲ   

ಮಡಿಕೇರಿ: ವಿಜಯದಶಮಿಯ ದಶಮಂಪಟಗಳ ಶೋಭಾಯಾತ್ರೆಯಲ್ಲಿ ಶುಂಭ ನಿಶುಂಭರ ಸಂಹಾರವನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ. ಈ ಬಾರಿ ಮಹದೇವಪೇಟೆಯ ಚೌಡೇಶ್ವರಿ ದೇಗುಲದಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಆದಿಶಕ್ತಿಯಿಂದ ಶುಂಭ ನಿಶುಂಬರ ಸಂಹಾರದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದೆ.

ಮಂಡಳಿಯು ತನ್ನ 60ನೇ ವರ್ಷದ ಮಂಟಪವನ್ನು ಸುಮಾರು ₹ 18 ಲಕ್ಷ ವೆಚ್ಚದಲ್ಲಿ ರೂಪಿಸಲು ಎಲ್ಲ ಬಗೆಯ ಸಿದ್ಧತೆಗಳನ್ನು ನಡೆಸಿದೆ. ಆದಿಶಕ್ತಿಯು ರಾಕ್ಷಸರಾದ ಶುಂಭ ನಿಶುಂಭರನ್ನು ಸಂಹಾರ ಮಾಡುವ ದೃಶ್ಯಗಳನ್ನು ರುದ್ರ ರಮಣೀಯವಾಗಿ ಕಟ್ಟಿಕೊಡಲು ಕಲಾವಿದರು ಅವಿರತ ಶ್ರಮಿಸುತ್ತಿದ್ದಾರೆ.

ದೇವ, ದಾನವರೂ ಸೇರಿದಂತೆ ಒಟ್ಟು 24 ಕಲಾಕೃತಿಗಳು ಮಂಪಟದಲ್ಲಿ ಇರಲಿದೆ. ಇದಕ್ಕಾಗಿ ಎರಡು ಟ್ರಾಕ್ಟರ್‌ ಬಳಸಲಾಗಿದೆ. ಅತ್ಯಾದ್ಭುತ ರೀತಿಯಲ್ಲಿ ಕಥಾನಕವನ್ನು ಪ್ರಸ್ತುತಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನೂ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎರ್ನಾಕುಲಂನಿಂದ ವಿಶೇಷ ಬೋರ್ಡ್‌ ಬರುತ್ತಿದೆ. ಫೈರ್‌ ವರ್ಕಸ್‌ ರಿಯಾಲಿಟಿ ಶೋ ಖ್ಯಾತಿಯ ರಘು ಶ್ರಾಫ್‌ ನೀಡಲಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷ ಅಮೆಮನೆ ದೇವಿಪ್ರಸಾದ್, ‘ವಿಜಯದಶಮಿಯಂದು ರಾತ್ರಿ 11.45ಕ್ಕೆ ಬಾಟಾ ಶೋರೂಂ ಎದುರು ಪ್ರದರ್ಶನ ಇರಲಿದೆ’ ಎಂದು ಹೇಳಿದರು.

ಅಂಧಕಾಸುರ ವಧೆ ಕಥಾಪ್ರಸಂಗವನ್ನೂ ಕಣ್ತುಂಬಿಕೊಳ್ಳಬಹುದು

ಈ ಬಾರಿಯ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಸಮಿತಿಯು ಅಂಧಕಾಸುರ ವಧೆ ಪ್ರಸಂಗವನ್ನು ಪ್ರಸ್ತುತಪಡಿಸುತ್ತಿದೆ.

ಸುಮಾರು 18 ಲಕ್ಷ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಮಂಟಪದಲ್ಲಿ 19 ಕಲಾಕೃತಿಗಳು ಇರಲಿವೆ. ಇದರ ಆರ್ಚ್‌ ಬೋರ್ಡ್‌ನ್ನು ದಿಂಡಿಗಲ್ಲಿನಿಂದ ತರಿಸಲಾಗುತಿದ್ದು, ಬೆಂಗಳೂರಿನ ಆರ್‌.ಜೆ. ಫೈರ್ಸ್ ವರ್ಕ್ಸ್‌ನವರು ಅದ್ಭುತ ರೀತಿಯಲ್ಲಿ ಬೆಳಕಿನ ಚಿತ್ತಾರ ಮೂಡಿಸಲಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ದಶಮಂಟಪಗಳ ಸಮಿತಿಯ ಅಧ್ಯಕ್ಷ ಮನು ಮಂಜುನಾಥ್, ‘ಈ ಬಾರಿ ದೇಗುಲದ ಮುಂಭಾಗ, ಗಾಂಧಿ ಮೈದಾನ ಹಾಗೂ ನಗರಸಭೆ ಮುಂಭಾಗ ಪ್ರದರ್ಶನ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.