ಗೋಣಿಕೊಪ್ಪಲು ಬಳಿಯ ಕುಂದದ ಪಿ.ಎಂ.ಅನಿಲಗೆ ಸೆರಿದ ಬಾಳೆ ತೋಟ ಮಳೆಯಿಂದ ಹಾನಿಗೊಂಡಿರುವುದು
ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಕುಂದದ ಪಿ.ಎ.ಅನಿಲ ಎಂಬವರಿಗೆ ಸೇರಿದ ಬಾಳೆತೋಟ ಫಸಲು ಬಿಟ್ಟ ಬಾಳೆ ಗಿಡ ಭಾರಿ ಗಾಳಿ ಮಳೆಗೆ ಮುರಿದು ಬಿದ್ದು, ತೀವ್ರ ಹಾನಿಯಾಗಿದೆ.
ಗೊನೆಬಿಟ್ಟು ಬಾಗಿದ್ದ ಬಾಳೆ ಒಂದು ವಾರದಿಂದ ಸುರಿಯುತ್ತಿರುವ ಬಿರುಗಾಳಿ ಮಳೆಗೆ ಸಿಲುಕಿ ನೆಲಕಚ್ಚಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅನಿಲ ಅಲವತ್ತುಕೊಂಡಿದ್ದಾರೆ.
ಮತ್ತೊಂದು ಕಡೆ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪಿಯ ಹಳ್ಳಿಗಟ್ಟು ವಿನ ಅಲಿಮಾ ಅವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ 50 ವರ್ಷದಷ್ಟು ಹಳೆಯದಾದ ಮನೆಯ ಒಂದು ಭಾಗದ ಗೋಡೆ ಕುಸಿದಿದೆ.
ಮಂಗಳವಾರ ಬೆಳಿಗ್ಗೆ ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ಎದುರಿಸಲು ತಾಲ್ಲೂಕು ಆಡಳಿತ ಸರ್ವ ಸನ್ನದ್ಧಗೊಂಡಿದೆ. ತಾಲ್ಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆಯಿಂದ ಏನಾದರೂ ಸಮಸ್ಯೆ ಎದುರಾದಲ್ಲಿ ಕೂಡಲೆ ತಾಲ್ಲೂಕು ಆಡಳಿತವನ್ನು ಸಂಪರ್ಕಿಸಬೇಕು. ಜತೆಗೆ ವಿಷಯ ತಿಳಿದವರೂ ಕೂಡ ಫೋನ್ ಮೂಲಕ ಕೂಡಲೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಂಗಳವಾರ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಕೀರೆಹೊಳೆ ಮತ್ತು ಲಕ್ಷ್ಮಣತೀರ್ಥ ನದಿ ನೀರಿನ ಪ್ರಮಾಣ ಇಳಿಮುಖವಾಗಿತ್ತು. ಹಳ್ಳದ ಗದ್ದೆಗಳ ನೀರು ಕೂಡ ಕ್ಷೀಣಿಸಿತ್ತು. ಆದರೆ ಮಳೆ ಮಾತ್ರ ಆಗಾಗ್ಗೆ ಬಂದು ರಭಸವಾಗಿ ಬೀಳುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.