ನಾಪೋಕ್ಲು: ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಗ್ರಾಮೀಣ ಜನರನ್ನು ಹೈರಾಣಾಗಿಸಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದೆ. 24 ಗಂಟೆಗಳಲ್ಲಿ 125 ಸೆ.ಮೀ ದಾಖಲೆ ಮಳೆಯಾಗಿದೆ.
ಬಿರುಸಿನ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯೊಂದಿಗೆ ಗಾಳಿಯು ಬೀಸುತ್ತಿದೆ. ಚಳಿಯೂ ಕಾಡುತ್ತಿದ್ದು ಜನಜೀವನ ಅಸ್ತವ್ಯಸ್ತ ಗೊಂಡಿದೆ. ಗಾಳಿಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದುಬಿದ್ದಿದ್ದು ಎರಡು ದಿನಗಳಿಂದ ಭಾಗಮಂಡಲ ಮತ್ತುನಾಪೋಕ್ಲು ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ..
ಇದೇ ರೀತಿ ಮಳೆ ಮುಂದುವರಿದರೆ, ಭಾಗಮಂಡಲ, ನಾಪೋಕ್ಲು ಭಾಗದಲ್ಲಿ, ಜಿಲ್ಲೆಯ ಇತರಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಂಭವವಿದೆ.
ಮಳೆ-ಗಾಳಿಯಿಂದಾಗಿ ಕಾಫಿಯ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತಿದ್ದು ಕೃಷಿಚಟುವಟಿಕೆಗಳು ಸ್ಥಗಿತಗೊಂಡಿವೆ. ನದಿ ತೊರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ತಲಕಾವೇರಿಯಲ್ಲಿ ಇದುವರೆಗೆ 52.5 ಸೆ.ಮೀ ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ 44.8 ಸೆ.ಮೀ ಮಳೆಯಾಗಿದೆ.
ವರ್ಷ ತಾಪಮಾನ ಏರಿಕೆಯಿಂದಾಗಿ ಕಾಫಿ ಇಳುವರಿಯಲ್ಲಿ ಕುಸಿತ ಕಂಡಿದ್ದು ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಾಫಿ ಮಿಡಿ ಕಚ್ಚುವ ಈ ಹಂತದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಭಾನುವಾರವೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.