ADVERTISEMENT

ರೈತರಿಂದ ಸಂಭ್ರಮದ ಹೊನ್ನಾರು ಉತ್ಸವ

ಹೆಬ್ಬಾಲೆ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 20:04 IST
Last Updated 10 ಏಪ್ರಿಲ್ 2019, 20:04 IST
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ನಡೆಸಿದರು
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ನಡೆಸಿದರು   

ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವನ್ನು (ಚಿನ್ನದ ಉಳುಮೆ) ಬುಧವಾರ ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

ರೈತರು ತಮ್ಮ ಎತ್ತು, ಕರುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು. ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಗಳಿಗೆ ಪೂಜೆ ಮಾಡಿದರು.

ಹೆಬ್ಬಾಲೆ ಗ್ರಾಮದ ಬಸವೇಶ್ವರ ಯುವಕ ಸಂಘ ಮತ್ತು ಬನಶಂಕರಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆದ ಉತ್ಸವದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಜಾನುವಾರುಗಳಿಗೆ ಅರ್ಚಕ ಜಗದೀಶ್ ಸಾಮೂಹಿಕ ಪೂಜೆ ಸಲ್ಲಿಸಿದರು. ನಂತರ ಹೊಸ ಪಂಚಾಂಗದಂತೆ ಗ್ರಾಮದ ರೈತ ಎಚ್.ಜೆ.ಸುದರ್ಶನ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ‘ಹೊನ್ನಾರು’ ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು.

ADVERTISEMENT

ಬಸವೇಶ್ವರ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ಬನಶಂಕರಿ ದೇವಿಗೆ ಪ್ರದಕ್ಷಿಣೆ ಹಾಕಿ ಉಳುಮೆ ಆರಂಭಿಸಿದರು. ನಂತರ ರೈತರು ತಮ್ಮ ಜಮೀನುಗಳಿಗೆ ತೆರಳಿ ಉಳುಮೆ ಆರಂಭಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್, ಕಾರ್ಯದರ್ಶಿ ಎಚ್.ಪಿ.ರಾಜಪ್ಪ, ಖಜಾಂಚಿ ಎಚ್.ಎಸ್.ಬಸಪ್ಪ, ಉಪಾಧ್ಯಕ್ಷ ರಮೇಶ್, ಸೋಮಣ್ಣ, ಕಾಂತರಾಜ್, ಶಶಿಧರ್, ಸ್ವಾಮಿ, ಚಂದ್ರಪ್ಪ, ಲೋಕೇಶ್, ಜಿ.ಪಂ ಸದಸ್ಯ ಎಚ್.ಆರ್.ಶ್ರೀನಿವಾಸ್, ಗ್ರಾ.ಪಂ ಅಧ್ಯಕ್ಷೆ ಲತಾ ಸತೀಶ್ ಹಾಜರಿದ್ದರು.

ಬಹುಮಾನ ವಿತರಣೆ: ಹೊನ್ನಾರು ಉತ್ಸವದಲ್ಲಿ ಜಾನುವಾರುಗಳಿಗೆ ಉತ್ತಮವಾಗಿ ಅಲಂಕಾರಮಾಡಿದ್ದ ರೈತರಾದ ಹಳಗೋಟೆ ಜಗದೀಶ್ ಅವರಿಗೆ ಪ್ರಥಮ ಬಹುಮಾನ, ಚಿಕ್ಕಹಳ್ಳಿ ಬೀದಿ ಚನ್ನರಾಜು ದ್ವಿತೀಯ, ಮರೂರು ಶಿವಕುಮಾರ್
ಅವರಿಗೆ ತೃತೀಯ ಬಹುಮಾನ ನೀಡಲಾಯಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎಚ್.ಎಸ್.ಯುವರಾಜ್ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಯಮಾನ್ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.