ADVERTISEMENT

ಹೊಸಕ್ಕಿ ಪಾಯಸ, ತೊಂಬಿಟ್ಟು ತಿಂದು ಸಂಭ್ರಮ

ಸಂಭ್ರಮದ ಹುತ್ತರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:30 IST
Last Updated 11 ಡಿಸೆಂಬರ್ 2019, 13:30 IST
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರಿನಲ್ಲಿ ಐನಂಡ ಕುಟುಂಬಸ್ಥರು ಕದಿರು ತೆಗೆಯುವ ಮೂಲಕ ಹುತ್ತಿರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರಿನಲ್ಲಿ ಐನಂಡ ಕುಟುಂಬಸ್ಥರು ಕದಿರು ತೆಗೆಯುವ ಮೂಲಕ ಹುತ್ತಿರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು   

ಗೋಣಿಕೊಪ್ಪಲು: ಸಂಭ್ರಮದ ಹುತ್ತರಿ ಹಬ್ಬವನ್ನು ಕೆಲವೆಡೆ ಸಡಗರದಿಂದ ಆಚರಿಸಲಾಯಿತು.

ಬುಧವಾರ ಮುಂಜಾನೆ ಸ್ನಾನ, ಸಂಧ್ಯಾವಂದನೆ ಗೈದರು. ಬಳಿಕ 'ಪೊಲಿ ಪೊಲಿ ದೇವಾ' ಎಂದು ಕೂಗುತ್ತಾ ಪೂಜಾ ಸಾಮಗ್ರಿಗಳನ್ನು ತಟ್ಟೆಯಲ್ಲಿಟ್ಟು ಗದ್ದೆ ಕಡೆಗೆ ಸಾಗಿದಿರು.

ಭತ್ತದ ಕದಿರು ತೆಗೆಯುವ ಗದ್ದೆ ಬದುವಿನಲ್ಲಿ ಮಾವಿನ ಎಲೆಗಳ ತೋರಣ ಕಟ್ಟಲಾಗಿತ್ತು. ಹಾಲು, ಜೇನುತುಪ್ಪವನ್ನು ಭತ್ತದ ಕದಿರಿನ ಬುಡಕ್ಕೆ ಸುರಿದು ಅಭಿಷೇಕ ಮಾಡಿದರು. ಅರಿಸಿನ ಕುಂಕಮ ಹಚ್ಚಿ, ದೀಪ ಬೆಳಗಿಸಿ ಗಂಧದ ಕಡ್ಡಿಯಿಂದ ಕದಿರಿನ ಬುಡ ಪೂಜಿಸಿದರು. ಬಳಿಕ ಮನಯ ಯಜಮಾನ ಭತ್ತದ ಬದುವಿನಲ್ಲಿ ನಿಂತು ಆಕಾಶದ ಕಡೆಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ಭತ್ತದ ಕದಿರು ಕೊಯ್ದು ದಡದಲ್ಲಿದ್ದ ಎಲ್ಲರೂ 'ಪೊಲಿ ಪೊಲಿ ದೇವಾ' ಎಂದು ಸ್ಮರಣೆ ಮಾಡುತ್ತಾ ಗದ್ದೆಯಿಂದ ಮೇಲೆ ಬಂದರು.

ADVERTISEMENT

ಬಳಿಕ ಕದಿರನ್ನು ಕೈ ಯಲ್ಲಿ ಹಿಡಿದು ಮನೆಯತ್ತ ಸಾಗಿದರು. ಮನೆಯಲ್ಲಿ ತೂಕ್ ಬೊಳಕ್ ಬಳಿ ಇಟ್ಟು ದೇವರಿಗೆ ಭಕ್ತಿ ಪೂರ್ವಕವಾಗಿ ಕೈ ಮುಗಿದರು. ಆನಂತರ ಹೊಸ ಅಕ್ಕಿಯಿಂದ ಮಾಡಿದ ಪಾಯಸ, ಹುತ್ತರಿ ತೊಂಬಿಟ್ಟು ತಿಂದು ಸಂಭ್ರಮಿಸಿದರು.

ಪೊನ್ನಂಪೇಟೆ ಬಳಿಯ ಬೇಗೂರಿನಲ್ಲಿ ಅಲ್ಲಿನ ಪೂಳೆಮಾಡ ದೇವಸ್ಥಾನದಲ್ಲಿ ಊರಿನವರೆಲ್ಲ ಶ್ರದ್ಧಾಭಕ್ತಿಯಿಂದ ಕದಿರು ತೆಗೆಯುವ ಮೂಲಕ ಹಬ್ಬ ಆಚರಿಸಿದರು.

ನಲ್ಲೂರಿನಲ್ಲಿ ಪುಳ್ಳಂಗಡ ಕುಟುಂಬಸ್ಥರು ಒಂದೆಡೆ ಸೇರಿ ದೇವರ ಕದಿರು ತೆಗೆದರು. ಕಿರುಗೂರಿನಲ್ಲಿಯೂ ಗ್ರಾಮದ ಮುಖಂಡ ಚೆಪ್ಪುಡೀರ ಪೊನ್ನಪ್ಪ ನೇತೃದಲ್ಲಿ ಕದಿರು ತೆಗೆಯಲಾಯಿತು. ಬಳಿಕ ಅಲ್ಲಿನ ಮತ್ತೂರು ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಚಿಕ್ಕಮಂಡೂರಿನಲ್ಲಿ ಐನಂಡ ಕುಟುಂಬಸ್ಥರು ಒಂದೆಡೆ ಸೇರಿ ನಿವೃತ್ತ ಸೇನಾಧಕಾರಿ ಐನಂಡ ಮಂದಣ್ಣ ಅವರ ನೇತೃತ್ವದಲ್ಲಿ ಕದಿರು ತೆಗೆದರು. ಕುಟುಂಬದ ಸದಸ್ಯರಾದ ಐನಂಡ ತಮ್ಮಯ್ಯ, ಐನಂಡ ಬೋಪಣ್ಣ, ಐನಂಡ ಭಾರತಿ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.