ವಿರಾಜಪೇಟೆ (ಕೊಡಗು): ಕೊಡಗು ಜಿಲ್ಲೆಯ ಮೂಲಕ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡುವಂತೆ ಕೇರಳದ ಕಣ್ಣೂರಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಹರಿದಾಸ್ ನೇತೃತ್ವದ ತಂಡವು ಬುಧವಾರ ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೋವಿಡ್ ಕಾರಣಕ್ಕೆ ಈ ಎರಡೂ ರಾಜ್ಯದ ನಡುವೆ ಕೆಲವು ತಿಂಗಳಿಂದ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಇಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ನಿರ್ಬಂಧ ತೆರವು ಮಾಡಬೇಕು ಎಂದು ಕೋರಿದರು.
ಕೇರಳ ರಾಜ್ಯಕ್ಕೆ ಕರ್ನಾಟಕದಿಂದ ವಾಹನಗಳು ಮುಕ್ತವಾಗಿ ಬರುತ್ತಿವೆ. ಆದರೆ, ಕೇರಳದಿಂದ ಬರುವ ವಾಹನಗಳಿಗೆ ಕೊಡಗಿನ ಕುಟ್ಟ ಹಾಗೂ ಮಾಕುಟ್ಟದಲ್ಲಿ ನಿರ್ಬಂಧ ವಿಧಿಸಲಾಗುತ್ತಿದೆ. 72 ಗಂಟೆಯ ಒಳಗಿನ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕಿದೆ ಎಂದು ಎನ್.ಹರಿದಾಸ್ ಹೇಳಿದರು.
‘ಕೊರೊನಾ ಸೋಂಕಿತರ ಪ್ರಮಾಣ ಕೇರಳದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿರುವುದರಿಂದ ಸದ್ಯ ನಿಯಮ ಸಡಿಲಿಕೆ ಸಾಧ್ಯವಿಲ್ಲ. ಕೇರಳ ರಾಜ್ಯದವರು ನ್ಯಾಯಾಲಯಕ್ಕೂ ಹೋಗಿದ್ದು, ನ್ಯಾಯಾಲಯ ಸಹ ಅದನ್ನು ಮಾನ್ಯ ಮಾಡಿಲ್ಲ. ಸದ್ಯ ಕೇರಳದಿಂದ ರಾಜ್ಯಕ್ಕೆ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಎಲ್ಲರೂ ಪಾಲಿಸಬೇಕು. ಎರಡು ಲಸಿಕೆ ಪಡೆದಿದ್ದರೂ, ಅದನ್ನು ಮಾನ್ಯ ಮಾಡಲು ಸಾದ್ಯವಿಲ್ಲ. ಆರ್ಟಿಪಿಸಿಆರ್ ವರದಿ ಕಡ್ಡಾಯ. ಸರ್ಕಾರದ ನಿರ್ಬಂಧಗಳಿರುವುದರಿಂದ ನಾನು ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯೊಂದಿಗೇ ಚರ್ಚಿಸಿ’ ಎಂದು ನಿಯೋಗಕ್ಕೆ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.