ADVERTISEMENT

ಕೊಡಗಿನ ಶೈಕ್ಷಣಿಕ ಪ್ರಗತಿಗೆ ಸ್ಪಂದನೆ

‘ಪಟ್ಟೋಲೆ ಪಳಮೆ’ ಕೃತಿ ಬಿಡುಗಡೆ ಮಾಡಿದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:27 IST
Last Updated 2 ಅಕ್ಟೋಬರ್ 2022, 6:27 IST
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ‘ಪಟ್ಟೋಲೆ ಪಳಮೆ’ (ಕೊಡವ-ಕನ್ನಡ-ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಮಾಡಿದರು. ಬೊಳ್ಳಜಿರ ಬಿ.ಅಯ್ಯಪ್ಪ,ಬಾಚರಣಿಯಂಡ ಅಪ್ಪಣ್ಣ, ವೀಣಾ ಪೂಣಚ್ಚ, ಎಂ.ಎಂ.ಮೀನಾಕ್ಷಿ ಇದ್ದಾರೆ
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಡಿಕೇರಿಯ ಪತ್ರಿಕಾ ಭವನದಲ್ಲಿ ಶನಿವಾರ ‘ಪಟ್ಟೋಲೆ ಪಳಮೆ’ (ಕೊಡವ-ಕನ್ನಡ-ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಮಾಡಿದರು. ಬೊಳ್ಳಜಿರ ಬಿ.ಅಯ್ಯಪ್ಪ,ಬಾಚರಣಿಯಂಡ ಅಪ್ಪಣ್ಣ, ವೀಣಾ ಪೂಣಚ್ಚ, ಎಂ.ಎಂ.ಮೀನಾಕ್ಷಿ ಇದ್ದಾರೆ   

ಮಡಿಕೇರಿ: ಕೊಡಗು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯುವ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭರವಸೆ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಪ್ರಸಾರಾಂಗ ಮತ್ತು ಕೊಡವ ಮಕ್ಕಡ ಕೂಟ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ‘ಪಟ್ಟೋಲೆ ಪಳಮೆ’ (ಕೊಡವ-ಕನ್ನಡ-ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಟ್ಟೋಲೆ ಪಳಮೆ’ ಕೃತಿ ಕೊಡವರಿಗೆ ಭಗವದ್ಗೀತೆ ಇದ್ದಂತೆ. ಪ್ರಸ್ತುತ ಕನ್ನಡ, ಇಂಗ್ಲೀಷ್‌ಗೆ ಭಾಷಾಂತರವಾಗಿರುವುದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.

ADVERTISEMENT

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ‘ಪಟ್ಟೋಲೆ ಪಳಮೆ’ ಕೃತಿಯಲ್ಲಿ ಕೊಡವರ ಪ್ರಾಚೀನ ಕಾಲದ ಪದ್ಧತಿ, ಪರಂಪರೆ, ಸಂಸ್ಕೃತಿಯನ್ನು ಸಂಗ್ರಹಿಸಲಾಗಿದೆ. ಕಾವೇರಿ ಪುರಾಣ, ವಿವಾಹ ಪದ್ಧತಿ, ಸಾವಿನ ಪದ್ಧತಿ, ಕೊಡಗಿನ ಐತಿಹಾಸಿಕ ವಿವರ, ಕೊಡವ ಗಾದೆ, ಒಗಟು, ಮೂಢನಂಬಿಕೆ ಸೇರಿದಂತೆ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ವಿವರಗಳನ್ನು ನೀಡಲಾಗಿದೆ. ಇದರಿಂದ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳು ಇನ್ನೂ ಜೀವಂತವಾಗಿ ಉಳಿಯಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟದಿಂದ 7 ವರ್ಷ ನಡೆಸಲಾದ ‘ಆಟ್ ಪಾಟ್ ಪಡಿಪು’ ಕಾರ್ಯಕ್ರಮದಲ್ಲಿ ‘ಪಟ್ಟೋಲೆ ಪಳಮೆ’ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಾಗೂ 4 ಸಾವಿರ ‘ಆಟುಪಾಟ್ ಪಡಿಪು’ ಪುಸ್ತಕಗಳನ್ನು ಶಾಲೆಗಳಿಗೆ ಉಚಿತವಾಗಿ ನೀಡುವ ಮೂಲಕ ಯುವ ಪೀಳಿಗೆಗೆ ಕೊಡವ ಆಚಾರ, ವಿಚಾರ, ಪದ್ಧತಿಯನ್ನು ತಿಳಿಸುವ ಕೆಲಸ ಮಾಡಲಾಗಿದೆ’ ಎಂದರು.

ಚಿಕ್ಕಅಳುವಾರದಲ್ಲಿ ಪ್ರಾರಂಭಿಸಲಾಗುವ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಿಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯಲು ಅವಕಾಶ ಕಲ್ಪಿಸುವಂತೆ ಇದೇ ಸಂದರ್ಭದಲ್ಲಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ ಮಾಡಿದರು.

ಮುಂಬೈ ಎಸ್.ಎನ್.ಡಿ.ಟಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ.ವೀಣಾ ಪೂಣಚ್ಚ, ‘ಪಟ್ಟೋಲೆ ಪಳಮೆ’ ಕೃತಿ ಕುರಿತು ಮಾತನಾಡಿದರು.

‘ಪಟ್ಟೋಲೆ ಪಳಮೆ’ ಕೃತಿಯ ಕೊಡವ-ಕನ್ನಡ-ಇಂಗ್ಲಿಷ್ ಅವೃತ್ತಿಯ ಅನುವಾದಕರಾದ ಬೊವ್ವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ ಅವರು ವಿಡಿಯೊ ಸಂದೇಶದ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಎಂ.ಎಂ.ಮೀನಾಕ್ಷಿ, ಚಿಂತಕರಾದ ಚೋಕಿರ ಅನಿತಾ ದೇವಯ್ಯ, ಐಚಂಡ ರಶ್ಮಿ ಮೇದಪ್ಪ, ಕಾವ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.