ADVERTISEMENT

ಚಿಕ್ಕನಾಯಕನಹೊಸಳ್ಳಿ: ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಸಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:48 IST
Last Updated 8 ನವೆಂಬರ್ 2025, 4:48 IST
ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 2025-26ನೇ ಸಾಲಿನ ಗ್ರಾಮಸಭೆಯನ್ನು ಅಧ್ಯಕ್ಷೆ ಎಂ.ಆರ್.ಲತಾಬಾಯಿ ಉದ್ಘಾಟಿಸಿದರು. ಉಪಾಧ್ಯಕ್ಷ ಬಸವರಾಜು, ಅಭಿವೃದ್ಧಿ ಅಧಿಕಾರಿ ಹೇಮಲತಾ ಹಾಗೂ ಸದಸ್ಯರು ಭಾಗವಹಿಸಿದ್ದರು
ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 2025-26ನೇ ಸಾಲಿನ ಗ್ರಾಮಸಭೆಯನ್ನು ಅಧ್ಯಕ್ಷೆ ಎಂ.ಆರ್.ಲತಾಬಾಯಿ ಉದ್ಘಾಟಿಸಿದರು. ಉಪಾಧ್ಯಕ್ಷ ಬಸವರಾಜು, ಅಭಿವೃದ್ಧಿ ಅಧಿಕಾರಿ ಹೇಮಲತಾ ಹಾಗೂ ಸದಸ್ಯರು ಭಾಗವಹಿಸಿದ್ದರು   

ಕುಶಾಲನಗರ: ಗಡಿ ಗ್ರಾಮ ಚಿಕ್ಕನಾಯಕನಹೊಸಳ್ಳಿಯಲ್ಲಿ ಚಿರತೆಯ ಚಲನವಲನ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಡಲೇ ಬೋನ್ ಅಳವಡಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಶುಕ್ರವಾರ ಶಿರಂಗಾಲ ಗ್ರಾಮಸಭೆಯಲ್ಲಿ ಒತ್ತಾಯಿಸಿದರು.

ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಕೊನೆಯ ಗ್ರಾಮಸಭೆಯಲ್ಲಿ ಸದಸ್ಯ ಎನ್.ಎಂ.ಧರ್ಮಪ್ಪ ಮಾತನಾಡಿ, ಚಿಕ್ಕನಾಯಕನಹಳ್ಳಿಯಲ್ಲಿ ಹಗಲಿನಲ್ಲಿ ಚಿರತೆ‌ ತನ್ನ ‌ಮರಿಗಳೊಂದಿಗೆ ಓಡಾಡುವುದನ್ನು ಗ್ರಾಮಸ್ಥರು ನೋಡಿ ಭಯಭೀತರಾಗಿದ್ದಾರೆ. ರೈತರು ಕೃಷಿ ಕಾರ್ಯಗಳಿಗೆ ಜಮೀನಿಗೆ ಹೋಗಲು, ದನಕರುಗಳನ್ನು ಹೊಲದಲ್ಲಿ ಮೇಯಿಸಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್‌ ಅಳವಡಿಸಿ ಚಿರತೆ ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು‌ ಎಂದು ಒತ್ತಾಯಿಸಿದರು.

ರೈತರಾದ ಜವರೇಗೌಡ, ಸುರೇಶ್ ಮಾತನಾಡಿ ಶಿರಂಗಾಲ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಹೆಚ್ಚಾಗಿ ಕೃಷಿಯೊಂದಿಗೆ
ಪಶುಸಂಗೋಪನೆ ಕೈಗೊಂಡಿದ್ದಾರೆ. ಆದರೆ‌ ಶಿರಂಗಾಲ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರಿಲ್ಲದೆ ತುಂಬ ತೊಂದರೆ‌ ಆಗಿದೆ. ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ಹೆಬ್ಬಾಲೆ ಪಶು ಆಸ್ಪತ್ರೆಯ ಡಾ.ಅಮೃತ ಮಾತನಾಡಿ, ತಾಲ್ಲೂಕಿನಲ್ಲಿ ಇಬ್ಬರೇ ಪಶುವೈದ್ಯರಿದ್ದು, ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಕಾಡಿದಾಗ ಮಾಹಿತಿ ನೀಡಿದರೆ ಖುದ್ದು ಬಂದು ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು.

ಮಣಜೂರು ಕಲಾಭವನ ಕಾಮಗಾರಿ ಮುಗಿದು ಏಳೆಂಟು ವರ್ಷಗಳೇ ಕಳೆದರೂ ಗುತ್ತಿಗೆದಾರರ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿಲ್ಲ ಎಂದು ಗ್ರಾಮ ಸಮಿತಿ ಅಧ್ಯಕ್ಷ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಪಿಡಿಒ ತಿಳಿಸಿದರು.

ಗ್ರಾಮದ ಸೊತ್ತೆಹಳ್ಳ ರಸ್ತೆ ಸಂಪೂರ್ಣ ಹಾನಿ ರೈತರಿಗೆ ತೊಂದರೆ ಆಗಿದೆ. ಈ ರಸ್ತೆಯಲ್ಲಿ ಎತ್ತಿನ ಗಾಡಿಗಳು ಸಂಚರಿಸಲು ಸಾಧ್ಯವಾಗದ‌ ಸ್ಥಿತಿ ಇದೆ ಎಂದು ಸಿ.ಎನ್.ಲೋಕೇಶ್ ಅಧಿಕಾರಿಗಳ ಗಮನ‌ ಸೆಳೆದರು. ಈ‌ ಕುರಿತು ನೀರಾವರಿ ಇಲಾಖೆ ಅಧಿಕಾರಿ ಸೌಮ್ಯ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.‌

ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ಗ್ರಾಮದಲ್ಲಿ ಹಕ್ಕುಪತ್ರ ಇಲ್ಲದ ಕುಟುಂಬಗಳಿಗೆ ಯಾವಾಗ ಹಕ್ಕುಪತ್ರ ನೀಡುತ್ತಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪಿಡಿಒ ಹೇಮಲತಾ ಪ್ರತಿಕ್ರಿಯಿಸಿ, ಹಕ್ಕುಪತ್ರ ಇಲ್ಲದವರ ಪಟ್ಟಿ ಮಾಡಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

ಅಭಿವೃದ್ಧಿ ಅಧಿಕಾರಿ ಹೇಮಲತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಗೆ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕಾಗಿದೆ. ಗ್ರಾಮಸ್ಥರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಬೇಕು. ಪಂಚಾಯಿತಿ ವತಿಯಿಂದ ಕುರಿ, ಕೋಳಿ, ಹಸು ಸಾಕಾಣಿಕೆಗೆ ಕೊಟ್ಟಿಗೆ ಧನಸಹಾಯ ನೀಡಲಾಗುತ್ತಿದೆ. ರೈತರು ಅರ್ಜಿ ಸಲ್ಲಿಸಬಹುದು ಎಂದರು.

ಪಂಚಾಯಿತಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಬಂದ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ‌ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಸ್ತೆ, ಚರಂಡಿ, ಬೀದ ದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಪಂಚಾಯಿತಿಯಿಂದ ಒದಗಿಸಲಾಗಿದೆ ಎಂದರು.

ನೋಡೆಲ್ ಅಧಿಕಾರಿ, ತೋಟಗಾರಿಕೆ ಹಿರಿಯ ನಿರ್ದೇಶಕ ಎನ್.ಎಸ್.ಪಣೇಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಧರ್ಮಪ್ಪ, ಶ್ರೀಕಾಂತ್, ಪ್ರದೀಪ್, ಸರಿತಾ, ಗೀತಾ, ಲಕ್ಷ್ಮಿ,‌ ಕಾರ್ಯದರ್ಶಿ ಮಂಜೂರು ಖಾನ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಕುಶಾಲನಗರ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಎಂ.ಆರ್.ಲತಾಬಾಯಿ ಮಾತನಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.