ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಬಿರುಸು ತಗ್ಗಿದೆ. ಆದರೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಕೆಲವೆಡೆ ಬಿಟ್ಟು ಬಿಟ್ಟು ಬಿರುಸಾಗಿ ಸುರಿಯುತ್ತಿದೆ.
ಒಂದೆರಡು ಗಂಟೆಗಳ ಬಿಡುವು ನೀಡುವ ಮಳೆ ಕೊಂಚ ಬಿರುಸಾಗಿಯೇ ಸುರಿಯುತ್ತಿದೆ. ನಿರಂತರವಾಗಿ ಶೀತಗಾಳಿ ಬೀಸುತ್ತಿದ್ದು, ಚಳಿ ಮತ್ತಷ್ಟು ಹೆಚ್ಚಿದೆ. ಮಾತ್ರವಲ್ಲ, ಆಗೊಮ್ಮೆ, ಈಗೊಮ್ಮೆ ಗಾಳಿ ಜೋರಾಗಿಯೂ ಬೀಸುತ್ತಿದೆ. ಮಳೆ ಸಂಪೂರ್ಣ ಕಡಿಮೆಯಾಗಿ ಬಿಸಿಲು ಬರುವುದು ಯಾವಾಗ ಎಂಬ ಪ್ರಶ್ನೆ ರೈತರು ಮತ್ತು ಬೆಳೆಗಾರರದ್ದಾಗಿದೆ.
ಮಳೆ ತಗ್ಗಿರುವುದರಿಂದ ಹಾರಂಗಿಯ ಒಳಹರಿವೂ ಸಹ 5 ಸಾವಿರ ಕ್ಯೂಸೆಕ್ಗೂ ಕಡಿಮೆಯಾಗಿದೆ. ಸದ್ಯ, 4,592 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 6,500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ನಲ್ಲೂರು ಗ್ರಾಮದ ಚನ್ನರಾಜಪ್ಪ ಅವರ ಮನೆ ಮಳೆಯಿಂದ ಹಾನಿಯಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದ್ದಾರೆ.
ಭಾಗಮಂಡಲ ಮತ್ತು ಶಾಂತಳ್ಳಿಯಲ್ಲಿ ತಲಾ 5 ಸೆಂ.ಮೀನಷ್ಟು ಮಳೆ ಸುರಿದಿದೆ. ಉಳಿದಂತೆ, ಮಡಿಕೇರಿಯಲ್ಲಿ 3, ಸಂಪಾಜೆ, ಶ್ರೀಮಂಗಲ, ಬಾಳೆಲೆ, ನಾಪೋಕ್ಲುವಿನಲ್ಲಿ ತಲಾ 2, ಹುದಿಕೇರಿ, ಶನಿವಾರಸಂತೆ, ಪೊನ್ನಂಪೇಟೆಯಲ್ಲಿ ತಲಾ 1.5, ವಿರಾಜಪೇಟೆ ಅಮ್ಮತ್ತಿ, ಸೋಮವಾರಪೇಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಆಹಾರ ಕಿಟ್ ವಿತರಣೆ
ಕುಶಾಲನಗರ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆ ನಿವಾಸಿಯಾದ ಬೇಬಿ ಅವರ ಗುಡಿಸಲಿಗೆ ಕಾವೇರಿ ನದಿ ನೀರು ನುಗ್ಗಿತ್ತು. ಈ ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದು ಇವರಿಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಆಹಾರ ಕಿಟ್ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.