ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮಳೆ ತುಸು ತಗ್ಗಿದ್ದರೂ ಗಾಳಿಯ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಭಾರಿ ವೇಗದಲ್ಲಿ ಬೀಸುತ್ತಿರುವ ಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಡಿಕೇರಿ ನಗರದಲ್ಲಿ ಇನ್ನೂ ಮಳೆ ನಿಂತಿಲ್ಲ. ಒಂದಷ್ಟು ಹೊತ್ತಿಗೆ ಒಮ್ಮೆ ಬಿರುಸಾಗಿಯೇ ಮಳೆ ಸುರಿಯುತ್ತಿದೆ. ಈ ವೇಳೆ ಬೀಸುವ ಗಾಳಿಯಲ್ಲಿ ಕೊಡೆ ಹಿಡಿದು ನಡೆಯುವುದೂ ಕಷ್ಟಕರವಾಗಿ ಪರಿಣಮಿಸಿದೆ. ಕೈಗಳಿಂದ ಕೊಡೆಗಳು ಹಾರಿ ಹೋದರೆ, ಮತ್ತೆ ಕೆಲವು ಬಾರಿ ಕೊಡೆಗಳು ತಿರುಗಿ ಹೋಗುತ್ತಿವೆ. ಜನಜೀವನ ಹಾಗೂ ಜನಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಿಪರೀತವಾದ ಶೀತ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ಉಷ್ಠಾಂಶ ಮಾತ್ರವಲ್ಲ ಗರಿಷ್ಠ ಉಷ್ಣಾಂಶದಲ್ಲೂ ಗಮನೀಯವಾದ ಇಳಿಕೆ ಕಂಡು ಬಂದಿದೆ. 17 ಡಿಗ್ರಿ ಸೆಲ್ಸಿಯಸ್ಗೂ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಜನರು ಚಳಿಯಿಂದ ನಡುಗುವಂತಾಗಿದೆ.
ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ–ಸೋಮವಾರವಾರಪೇಟೆ ರಸ್ತೆಗೆ ಮರವೊಂದು ಭಾರಿ ಗಾಳಿಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಾಪೋಕ್ಲು ಹೋಬಳಿ ಭಾಗದಲ್ಲೂ ಹಲವು ಮನೆಗಳು ಕುಸಿದಿವೆ.
ಮಳೆ ಮುಂದುವರಿಯಲಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ಜೂನ್ 25ರಂದು ಎಲ್ಲೊ ಅಲರ್ಟ್ ನೀಡಿದೆ. ಇದರಿಂದ ಬಿಸಿಲಿನ ವಾತಾವರಣ ಬರುವ ಸಾಧ್ಯತೆ ತೀರಾ ಕಡಿಮೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.