ಮಡಿಕೇರಿ: ಮನೆ ನಿರ್ಮಾಣ ವಿಳಂಬವಾದ ಬೆನ್ನಲ್ಲೇ ಬೆಂಗಳೂರಿನ ವಿಧಾನಸೌಧದ ಎದುರು ಹೋರಾಟ ನಡೆಸಲು ಕೊಡಗು ಪ್ರವಾಹ ಸಂತ್ರಸ್ತರು ನಿರ್ಧರಿಸಿದ್ದಾರೆ.
ನಗರದಲ್ಲಿ ಶುಕ್ರವಾರ ‘ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
‘ಪುನರ್ವಸತಿ ಕೆಲಸಗಳು ನಿಧಾನವಾಗಿವೆ. ಸರ್ಕಾರದ ಭರವಸೆಗಳು ಈಡೇರಿಲ್ಲ. ಕೃಷಿ ಭೂಮಿಯಲ್ಲಿ ಮಣ್ಣಿನ ರಾಶಿ ಬಿದ್ದಿದೆ. ನದಿಗಳೂ ದಿಕ್ಕು ಬದಲಿಸಿವೆ. ಸಂತ್ರಸ್ತರು ನೆಂಟರ ಮನೆ ಸೇರಿದ್ದಾರೆ. ಕೆಲವರಿಗೆ ಬಾಡಿಗೆ ಹಣವೂ ಪಾವತಿಯಾಗುತ್ತಿಲ್ಲ. ಕೊಡಗಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ರಾಜಕೀಯ ಚೆಲ್ಲಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ದೇವಯ್ಯ ಆರೋಪಿಸಿದರು.
‘ಜಿಲ್ಲೆಯ ನಾಲ್ಕು ಪಂಚಾಯಿತಿ ವ್ಯಾಪ್ತಿಯ 40 ಗ್ರಾಮಗಳಲ್ಲಿ ಅಪಾರ ಹಾನಿಯಾಗಿದೆ. ಪುನರ್ವಸತಿ ಕಾಮಗಾರಿಗಳು ಚುರುಕು ಪಡೆಯದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು. ಕೊಡಗು ಬಂದ್ಗೆ ಕರೆ ಕೊಡಲಾಗುವುದು’ ಎಂದರು.
‘₹ 1 ಕೋಟಿ ವ್ಯಯಿಸಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ಮಾಡಲಾಯಿತು. ಆದರೆ, ಸಂತ್ರಸ್ತರನ್ನು ಸರ್ಕಾರ ಮರೆಯಿತು. ಪುನರ್ವಸತಿ ಕಾಮಗಾರಿ ವಿಳಂಬಕ್ಕೆ ಜಿಲ್ಲೆಯ ಶಾಸಕರು, ಸಂಸದರೂ ಕಾರಣವಾಗಿದ್ದು ಅವರೂ ರಾಜೀನಾಮೆ ನೀಡಬೇಕು’ ಎಂದು ಮುಖಂಡ ರವಿ ಕಾಳಪ್ಪ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.