ಮಡಿಕೇರಿ: ಧರ್ಮ ವಿರೋಧಿ ಹಾಗೂ ಪ್ರವಾದಿ ನಿಂದನೆಗಳಿಗೆ ಕಡಿವಾಣ ಹಾಕುವ ಕಾನೂನು ರಚನೆಗೆ ಆಗ್ರಹಿಸಿ ಗುರುವಾರ ಮುಸ್ಲಿಂ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದವು. ನಗರದ ಇಂದಿರಾ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಮುಖಂಡ ಸಿ.ಎಂ. ಹಮೀದ್ ಮೌಲ್ವಿ ಮಾತನಾಡಿ, ‘ಸಮಾನತೆಯ ಸಮಾಜ ನಿರ್ಮಿಸಿದವರು ಪ್ರವಾದಿಗಳು. ಅವರಿಗೆ ಕೋಟ್ಯಂತರ ಅನುಯಾಯಿಗಳಿದ್ದಾರೆ. ಜನರ ನಂಬಿಕೆ, ಭಕ್ತಿಗೆ ವಿರುದ್ಧ ಹೇಳಿಕೆಗಳು ನೋವು ತಂದಿವೆ’ ಎಂದು ಹೇಳಿದರು.
‘ಕೋಮು ಸೌಹಾರ್ದಕ್ಕೆ ಹೆಸರಾದ ದೇಶದಲ್ಲಿ ಜಾತಿ, ಮತ, ಬೇಧಭಾವಗಳು ಹುಟ್ಟಿಕೊಂಡಿವೆ. ಇದು ದೇಶದ ಪ್ರಗತಿಗೆ ಮಾರಕ. ಸಮಾಜದಲ್ಲಿ ಒಡಕು ಮೂಡಿಸಲು ರಾಜಕೀಯ ಷಡ್ಯಂತ್ರಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹಿಸಿನ್, ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಕೆಲವರು ಪ್ರವಾದಿ ಅನುಯಾಯಿಗಳಿಗೆ ನೋವು ತಂದಿದ್ದಾರೆ. ಆದರೆ, ನೋವು ಉಂಟು ಮಾಡಿದವರ ವಿರುದ್ಧ ಯಾವ ಕ್ರಮವೂ ಆಗಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಇಬ್ರಾಹಿಂ ಮಾಸ್ಟರ್, ಸಂಘಟನೆ ಪದಾಧಿಕಾರಿಗಳಾದ ಯೂಸೂಫ್ ಹಾಜಿ, ನಜೀರ್ ಹಾಜಿ, ಮುಕ್ತಾರ್ ಹಾಜಿ, ಕರೀಂ, ಹಾರೂನ್ ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಖಾಸಿಂ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.