ADVERTISEMENT

ಪತ್ನಿ ಕೊಲೆ: ಪತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 14:29 IST
Last Updated 30 ಜನವರಿ 2019, 14:29 IST

ಮಡಿಕೇರಿ: ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ ನಡೆದಿದ್ದ ಗೃಹಿಣಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಜ.26ರಂದು ಕೊಳೆತ ಸ್ಥಿತಿಯಲ್ಲಿ ಮರ್ಜಿನಾ ಖಾತುನ್ (25) ಅವರ ಮೃತದೇಹ ಪತ್ತೆಯಾಗಿತ್ತು. ಆಕೆಯ ಪತಿ ಉಸ್ಮಾನ್ ಆಲಿ (40) ಕೊಲೆ ಮಾಡಿದ್ದು ಆತನನ್ನು ಬಂಧಿಸಲಾಗಿದೆ.

ಇಬ್ಬರೂ ಅಸ್ಸಾಂ ಮೂಲದ ಕಾರ್ಮಿಕರಾಗಿದ್ದರು. ವಿರಾಜಪೇಟೆಯ ಹೆಗ್ಗಳದ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಮೃತದೇಹದ ಪಕ್ಕದಲ್ಲಿದ್ದ ಪಾನ್‌ಕಾರ್ಡ್‌ನಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಪತಿಯನ್ನು ವಿಚಾರಿಸದ ಸಂದರ್ಭ ಪ್ರಕರಣ ಬಯಲಾಗಿದೆ ಎಂದು ಸುಮನ್ ತಿಳಿಸಿದರು.

ಮೃತಪಟ್ಟ ಮರ್ಜಿನಾ, ಆರೋಪಿ ಉಸ್ಮಾನ್ ಆಲಿಯ ಎರಡನೇ ಪತ್ನಿ. ಮಲ್ಲಮಟ್ಟಿಯಲ್ಲಿದ್ದ ಮೊದಲನೇ ಪತ್ನಿ ಮಮ್ತಾಜ್‌, ಮರ್ಜಿನಾ ಅವಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದಳು. ಅದೇ ಕಾರಣಕ್ಕೆ ಅಕೆಯನ್ನು ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿಯಿತು ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ಅಸ್ಸಾಂ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರ ಮಾಹಿತಿಗಳನ್ನು ಆಯಾ ತೋಟ ಮಾಲೀಕರು ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸುಮನ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.