ADVERTISEMENT

ಗ್ರಾಹಕರ ಖಾತೆಯಲ್ಲಿ ಹಣ ಇದ್ದರೂ ಇಲ್ಲ ಎಂದ ಬ್ಯಾಂಕಿಗೆ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 5:01 IST
Last Updated 7 ಏಪ್ರಿಲ್ 2024, 5:01 IST
<div class="paragraphs"><p>ಬ್ಯಾಂಕ್‌ ಆಫ್ ಬರೋಡ</p></div>

ಬ್ಯಾಂಕ್‌ ಆಫ್ ಬರೋಡ

   

ಮಡಿಕೇರಿ: ಇಲ್ಲಿನ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಕೆ.ಬಿ.ಹೇಮಚಂದ್ರ (73) ಅವರ ಖಾತೆಯಲ್ಲಿ ಹಣ ಇದ್ದರೂ, ಇಲ್ಲ ಎಂದು ಚೆಕ್‌ಗೆ ಹಿಂಬರಹ ನೀಡಿದ್ದ ಆರೋಪದ ಮೇರೆಗೆ ಸಿದ್ದಾಪುರದ ಬ್ಯಾಂಕ್ ಆಫ್ ಬರೋಡ ಶಾಖೆಗೆ ಇಲ್ಲಿನ ಕೊಡಗು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ₹ 2 ಲಕ್ಷ ದಂಡ ವಿಧಿಸಿದೆ.

ಹೇಮಚಂದ್ರ ಅವರು 2023ರ ಜುಲೈ, 26 ರಂದು ಸಿದ್ದಾಪುರದ  ಜಿ.ಎ.ಪಿ.ಎ.ಸಿ.ಎಸ್ ಬ್ಯಾಂಕಿಗೆ ಬ್ಯಾಂಕ್ ಆಫ್ ಬರೋಡಾದ ಸಿದ್ದಾಪುರದ ಶಾಖೆಯ ₹ 70 ಸಾವಿರದ ಚೆಕ್ಕನ್ನು ಸಹಿ ಮಾಡಿ ನೀಡಿದ್ದರು. ಖಾತೆಯಲ್ಲಿ ₹ 99,605 ಬಾಕಿ ಇದ್ದರೂ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಸುಮಾರು 2 ತಿಂಗಳ ಬಳಿಕ ಖಾತೆಯಲ್ಲಿ ಹಣವಿಲ್ಲ ಎಂದು ಹಿಂಬರಹ ನೀಡಿ ಹಿಂತಿರುಗಿಸಿದ್ದರು. ನಂತರ, ಖಾತೆಯಲ್ಲಿ ಹಣವಿದ್ದರೂ ಇಲ್ಲವೆಂದಿರುವುದು ಬ್ಯಾಂಕಿನವರಿಗೆ ಅರಿವಿಗೆ ಬಂದು, ಇವರ ಖಾತೆಗೆ ಪರಿಹಾರವಾಗಿ ₹ 31 ಸಾವಿರ ಜಮೆ ಮಾಡಿದ್ದರು.

ADVERTISEMENT

ಇದರಿಂದ ಮನನೊಂದ ಹೇಮಚಂದ್ರ ಅವರು ಬ್ಯಾಂಕಿನ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಆಯೋಗದ ಪ್ರಭಾರ ಅಧ್ಯಕ್ಷೆ ಸಿ.ರೇಣುಕಾಂಬ ಹಾಗೂ ಸದಸ್ಯೆ ಗೌರಮ್ಮಣ್ಣಿ ಅವರು ವಿಚಾರಣೆ ನಡೆಸಿ ಬ್ಯಾಂಕಿನವರು ಸೇವಾ ನ್ಯೂನತೆ ಉಂಟು ಮಾಡಿರುವುದರಿಂದ ದಂಡನಾರ್ಹ ಪರಿಹಾರವಾಗಿ ₹ 2 ಲಕ್ಷವನ್ನು ವಾರ್ಷಿಕ ಶೇ 6ರ ಬಡ್ಡಿಯನ್ನು ಸೇರಿಸಿ ಪಾವತಿಸಬೇಕು ಎಂದು ಆದೇಶ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.