ಮಡಿಕೇರಿ: ‘ವನ್ಯಜೀವಿ– ಮಾನವ ಸಂಘರ್ಷ ತಡೆಗಟ್ಟಲು ಕೊಡಗಿನಿಂದ ಸಕಲೇಶಪುರದವರೆಗೂ 68 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ಅನ್ನು ಒಂದೇ ವರ್ಷದಲ್ಲಿ ಅಳವಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಇಲ್ಲಿನ ಹೆಲಿಪ್ಯಾಡ್ನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಇದೊಂದು ವೈಜ್ಞಾನಿಕ ಯೋಜನೆಯಾಗಿರಲಿದೆ. ತಜ್ಞರು ಕೂಡ ಈ ಕುರಿತು ಪರಿಶೀಲಿಸಿ ವರದಿ ನೀಡಲಿದ್ದಾರೆ’ ಎಂದರು.
‘ಆನೆಗಳು ತೋಟದಲ್ಲೇ ಬೀಡು ಬಿಟ್ಟು, ಇಲ್ಲೇ ಮರಿ ಹಾಕಿವೆ. ತಜ್ಞರನ್ನು ಕರೆಸಿ ಅವುಗಳನ್ನು ಹೊರಹಾಕುವ ಕ್ರಮಗಳನ್ನು ಕುರಿತು ಪರಿಶೀಲಿಸಲಾಗುವುದು. ಅರಣ್ಯೀಕರಣ ಹೆಚ್ಚು ಮಾಡುವುದು, ಪ್ರಾಣಿಗಳಿಗೆ ಕಾಡಿನಲ್ಲೇ ಆಹಾರ, ನೀರು ಸಿಗುವಂತೆ ಮಾಡುವುದಕ್ಕೆ ಮಾಸ್ಟರ್ ಪ್ಲಾನ್ ರೂಪಿಸುವುದು ಸೇರಿದಂತೆ ಹೊಸ ಹೊಸ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕೊಡಗಿನಲ್ಲಿ ರಸ್ತೆಗಳು ದುಸ್ಥಿತಿಯಲ್ಲಿರುವ ಇರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೊಡಗಿನಲ್ಲಿ ಕಳೆದ ವರ್ಷ ನಿರಂತರವಾಗಿ ಮಳೆ ಸುರಿಯಿತು. ಇದರಿಂದ ರಸ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಈಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬೇಸಿಗೆ ಕಳೆಯುವುದರೊಳಗೆ ಎಲ್ಲ ರಸ್ತೆಗಳೂ ಅಭಿವೃದ್ಧಿ ಕಾಣಲಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.