ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ನಿಟ್ಟೂರು ಬಳಿಯ ಚಿಣ್ಣರ ಹಾಡಿಯ ಸಂಪರ್ಕ ಸೇತುವೆಯ ದಡ ಕುಸಿದು ಹಾಡಿ ಜನರಿಗೆ ಆತಂಕ ಮೂಡಿಸಿದೆ.
‘ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗೆ ತೆರಳುವ ರಸ್ತೆ ತೋಡಿಗೆ ಮೂರು ತಿಂಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದೀಗ ಬಿದ್ದ ಭಾರಿ ಮಳೆಗೆ ಸೇತುವೆ ಒಂದು ಬದಿಯಲ್ಲಿ ಮಣ್ಣು ಕುಸಿದು ರಸ್ತೆಗೆ ಹಾನಿಯಾಗಿದೆ. ಸೇತುವೆ ಎರಡು ಬದಿಯಲ್ಲಿ ಕಲ್ಲು ಕಟ್ಟದೆ ಕೇವಲ ಮಣ್ಣು ಹಾಕಿರುವುದೇ ದಡ ಕುಸಿತಕ್ಕೆ ಕಾರಣವಾಗಿದೆ’ ಎಂದು ಹಾಡಿ ಜನರು ದೂರಿದ್ದಾರೆ.
‘ಮುಂದೆ ಇನ್ನೂ ಭಾರಿ ಮಳೆ ಸುರಿದರೆ ಸೇತುವೆ ದಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಹಾಡಿ ಜನರ ಓಡಾಟಕ್ಕೆ ತೊಂದರೆಯಾಗಲಿದೆ. ಹೆಚ್ಚಿನ ಕುಸಿತ ಆಗದಂತೆ ಈಗಲೆ ಕ್ರಮಕೈಗೊಳ್ಳಬೇಕು’ ಎಂದ ಹಾಡಿ ಜನರು ಒತ್ತಾಯಿಸಿದ್ದಾರೆ.
ದಕ್ಷಿಣ ಕೊಡಗಿನ ಮಳೆನಾಡು ಎನ್ನಿಸಿಕೊಂಡಿರುವ ಕೇರಳದ ಗಡಿಭಾಗ ಬಿರುನಾಣಿ, ಇರ್ಪು, ಕುಟ್ಟ ಮೊದಲಾದ ಭಾಗಗಳಿಗೆ ಗುರುವಾರವೂ ಧಾರಾಕಾರ ಮಳೆ ಸುರಿಯಿತು. ಬಿಡುವು ನೀಡುತ್ತಾ ರಭಸವಾಗಿ ಸುರಿದ ಮಳೆಗೆ ತೊರೆ ತೋಡುಗಳು ಮತ್ತಷ್ಟು ಭೋರ್ಗರೆದವು.
ಟಿ.ಶೆಟ್ಟಿಗೇರಿ ಭಾಗದ ಬರಪೊಳೆ, ಕುಂದ ಬಳಿಯ ಆಡುಗುಂಡಿ ಹೊಳೆ, ಬಿ.ಶೆಟ್ಟಿಗೇರಿ ಭಾಗದ ಕೊಂಗಣ ಹೊಳೆಗಳು ದಟ್ಟ ಕಾನನದ ನಡುವೆ ಮೈದುಂಬಿ ಗಜಗಾಂಭೀರ್ಯದಿಂದ ಹರಿಯುತ್ತಿವೆ. ಈ ನದಿಗಳನ್ನು ಸೇರುವ ತೊರೆತೋಡುಗಳು ಮೈದುಂಬಿ ಕೊಂಡಿವೆ.
ಲಕ್ಷ್ಮಣತೀರ್ಥ ನದಿ ಬಲ್ಯಮಂಡೂರು, ಕಾನೂರು, ಹರಿಹರ, ನಿಟ್ಟೂರು, ಬಾಳೆಲೆ ಭಾಗದಲ್ಲಿ ನದಿ ಬಯಲಿನ ಗದ್ದೆಗಳು ಜಲಾವೃತಗೊಂಡಿದ್ದು ಕಣ್ಣು ಹಾಯಿಸಿ ಕಡೆಯಲೆಲ್ಲ ನೀರು ಕಂಡು ಬರುತ್ತಿದೆ. ಗುರುವಾರ ಮಧ್ಯಾಹ್ನದಿಂದ ಮಳೆ ರಭಸ ತುಸು ಕಡಿಮೆಯಾಗಿದ್ದರೂ ನದಿ ತೊರೆಗಳ ನೀರಿನ ಮಟ್ಟದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.