ADVERTISEMENT

ಕೊಡಗು ಜಿಲ್ಲೆಯ ವಿವಿಧೆಡೆ ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 1:35 IST
Last Updated 9 ಸೆಪ್ಟೆಂಬರ್ 2020, 1:35 IST
ಸೋಮವಾರಪೇಟೆಯ ರೇಂಜರ್ಸ್ ಬ್ಲಾಕ್‌ನಲ್ಲಿ ತಡೆಗೋಡೆ ಕುಸಿದು ಮನೆಗೆ ನುಗ್ಗಿದ ಮಳೆ ನೀರನ್ನು ಹೊರಚೆಲ್ಲುತ್ತಿರುವ ಕುಟುಂಬಸ್ಥರು
ಸೋಮವಾರಪೇಟೆಯ ರೇಂಜರ್ಸ್ ಬ್ಲಾಕ್‌ನಲ್ಲಿ ತಡೆಗೋಡೆ ಕುಸಿದು ಮನೆಗೆ ನುಗ್ಗಿದ ಮಳೆ ನೀರನ್ನು ಹೊರಚೆಲ್ಲುತ್ತಿರುವ ಕುಟುಂಬಸ್ಥರು   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಮಳೆ ಅಬ್ಬರಿಸಿದೆ.

ತಲಕಾವೇರಿಯಲ್ಲಿ ಜೋರು ಮಳೆಯಾಗಿದೆ. ಚೇರಂಬಾಣೆ, ಅಪ್ಪಂಗಳ, ಸೋಮವಾರಪೇಟೆಯಲ್ಲೂ ಮಳೆ ಅಬ್ಬರಿಸಿದೆ. ಮಡಿಕೇರಿಯಲ್ಲೂ ಉತ್ತಮ ಮಳೆಯಾಗಿದೆ.

ಮನೆಗೆ ನುಗ್ಗಿದ ಮಳೆ ನೀರು

ADVERTISEMENT

ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.

ಕೆಲವು ದಿನಗಳಿಂದ ಮಳೆ ಇಲ್ಲದೆ ಮೇಲಿನ ಭತ್ತದ ಗದ್ದೆಗಳು ಒಣಗಲು ಆರಂಭವಾಗಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಚಿತ್ತರಾಗಿದ್ದಾರೆ.

ಪಟ್ಟಣದ ರೇಂಜರ್ಸ್ ಬ್ಲಾಕ್‌ನಲ್ಲಿ ತಡೆಗೋಡೆ ಕುಸಿದ ಪರಿಣಾಮ ಶಶಿಕುಮಾರ್ ಎಂಬುವವರ ಮನೆಯೊಳಗೆ ನೀರು ನುಗ್ಗಿತ್ತು. ನೀರು ಹೊರಚೆಲ್ಲಲುಮನೆಯವರು ಹರಸಾಹಸ ಪಡಬೇಕಾಯಿತು.

ಇದರೊಂದಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಜನತಾ ಕಾಲೊನಿಯಲ್ಲಿ ಚರಂಡಿ ಕಾಮಗಾರಿ ಹಾಗೂ ಗೌಡ ಸಮಾಜಕ್ಕೆ ತೆರಳುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಮಳೆಗೆ ಮಾಡಿದ್ದ ರಸ್ತೆಯೂ ಕೊಚ್ಚಿ ಹೋಗಿದೆ.

ವರುಣನ ಆರ್ಭಟ

ಸುಂಟಿಕೊಪ್ಪ: ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ದಿಢೀರನೇ ಮಳೆ ಸುರಿದಿದ್ದರಿಂದ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಕಳೆದ ಐದಾರು ದಿನಗಳಿಂದ ಇಳಿಮುಖಗೊಂಡಿದ್ದ ಮಳೆ 2ಗಂಟೆ ಸುಮಾರಿಗೆ ಶುರುವಾಗಿ ಒಂದು ಗಂಟೆ ಎಡೆಬಿಡದೇ ಸುರಿಯಿತು.

ಬೆಳಗಿನಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಒಮ್ಮೆಲೇ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿ ಭಾರಿ ಗುಡುಗಿನೊಂದಿಗೆ ಆರ್ಭಟಿಸಿತು. ಶಬ್ದಕ್ಕೆ ಅಂಜಿದ ಜನ ರಸ್ತೆ ಅಕ್ಕಪಕ್ಕದ ಅಂಗಡಿಗಳಲ್ಲಿ ಆಶ್ರಯ ಪಡೆದರು.

ಇಲ್ಲಿನ ಕುರಿ, ಮೀನು ಮಾರುಕಟ್ಟೆಗೆ ತೆರಳುವ ಮೆಟ್ಟಿಲಿನ ಮೂಲಕ ಮುಖ್ಯರಸ್ತೆಯ ನೀರು ರಭಸದಿಂದ ಹರಿದ ಪರಿಣಾಮ ಆ ಮೆಟ್ಟಿನ ಪಕ್ಕದ ಹೋಟೆಲ್, ಅಂಗಡಿ, ಜನತಾ ಕಾಲೊನಿಗೆ ತೆರಳಲು ಜನ ಪರದಾಡಿದರು. ಹೋಬಳಿ ವ್ಯಾಪ್ತಿಯ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.