ADVERTISEMENT

‘ಧರ್ಮದೆಡೆಗೆ ನಡೆದರೆ ಸಮಸ್ಯೆಗೆ ಮುಕ್ತಿ’

ಮಡಿಕೇರಿಯಲ್ಲಿ ವಿಚಾರ ವಿನಿಮಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 12:26 IST
Last Updated 20 ನವೆಂಬರ್ 2020, 12:26 IST
ಮಡಿಕೇರಿಯಲ್ಲಿ ನಡೆದ ‘ವಿಚಾರ ವಿನಿಮಯ ಕಾರ್ಯಕ್ರಮ’ದಲ್ಲಿ ಪತ್ರಕರ್ತೆ ಉಷಾ ಪ್ರೀತಮ್‌ ಮಾತನಾಡಿದರು
ಮಡಿಕೇರಿಯಲ್ಲಿ ನಡೆದ ‘ವಿಚಾರ ವಿನಿಮಯ ಕಾರ್ಯಕ್ರಮ’ದಲ್ಲಿ ಪತ್ರಕರ್ತೆ ಉಷಾ ಪ್ರೀತಮ್‌ ಮಾತನಾಡಿದರು   

ಮಡಿಕೇರಿ: ಪ್ರಸ್ತುತ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಬರಬೇಕಾದಲ್ಲಿ ದಾರ್ಶನಿಕತೆಯೆಡೆಗೆ ಹಾಗೂ ಧರ್ಮದೆಡೆಗೆ ಮರಳಬೇಕಾಗಿದೆ ಎಂದು ಮಂಗಳೂರಿನ ಶಾಂತಿಪ್ರಕಾಶನದ ವ್ಯವಸ್ಥಾಪಕ, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಎಂ.ಎಚ್.ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟರು.

ನಗರದ ಕಾರಣ್ಯ ಸದನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ ಪ್ರವಾದಿ ಮುಹಮ್ಮದ್ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಸೀರತ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ನಂತರದ ದಿನಗಳಲ್ಲಿ ಹಲವು ವಾಸ್ತವಿಕತೆಗಳನ್ನು ಅಂಗೀಕರಿಸಬೇಕಿದೆ. ಧರ್ಮಗಳು ಮನುಷ್ಯನಿಗೆ ಬದುಕಿನ ಚೌಕಟ್ಟನ್ನು ಕಲಿಸಿವೆ. ತಮ್ಮ ಗೌರವದ ಅರಿವನ್ನು ಮೂಡಿಸಿದೆ. ಧಾರ್ಮಿಕ ಚಿಂತನೆಗಳು ಮನುಷ್ಯನ ಬದುಕಿಗೆ ಆದರ್ಶದ ಬೆಂಬಲವನ್ನು ನೀಡಿದವು. ದೇವನ ಪ್ರವಾದಿಗಳು ಧರ್ಮದೆಡೆಗೆ ಮರಳಬೇಕೆಂದು ಜನರಿಗೆ ಆಹ್ವಾನ ನೀಡಿದರು. ಅದುವೇ ಪ್ರವಾದಿತ್ವದ ವಾಸ್ತವಿಕತೆಯಾಗಿದೆ ಎಂದರು.

ADVERTISEMENT

ಪತ್ರಕರ್ತೆ ಉಷಾ ಪ್ರೀತಮ್‌ ಮಾತನಾಡಿ, ಧರ್ಮಗಳಲ್ಲಿ ಯಾವುದೇ ದೋಷಗಳು ಕಾಣುವುದಿಲ್ಲ. ಆದರೆ, ಧರ್ಮದ ಅನುಯಾಯಿಗಳು ಎಂದೆನಿಸಿಕೊಂಡವರೇ ಧರ್ಮವನ್ನು ತಪ್ಪಾಗಿ ಗ್ರಹಿಸಿಕೊಂಡಿರುವುದರಿಂದ ಸಮಸ್ಯೆಗಳು ಉದ್ಭವಿಸಿವೆ ಎಂದು ಹೇಳಿದರು.

ಧರ್ಮಗಳ ನೈಜ ಸಾರವನ್ನು ಬಿತ್ತರಿಸುವುದರ ಮೂಲಕ ಆರೋಗ್ಯವಂತ ಸ್ವಸ್ಥ ಸಮಾಜವನ್ನು ನಿರ್ಮಿಸುವ ಗುರಿಯನ್ನು ಪ್ರವಾದಿ ಮುಹಮ್ಮದ್ ಅವರೂ ಸೇರಿದಂತೆ ಎಲ್ಲಾ ದಾರ್ಶನಿಕರೂ ಜನರಿಗೆ ಸಂದೇಶ ನೀಡಿದ್ದರು ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಮಾತನಾಡಿದರು. ಯು.ಅಬ್ದುಸ್ಸಲಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.