ADVERTISEMENT

‘ಸಂಸ್ಕಾರವಂತ ಬದುಕಿನಿಂದ ಶಾಶ್ವತ ಸ್ಥಾನ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 12:22 IST
Last Updated 12 ಡಿಸೆಂಬರ್ 2020, 12:22 IST
ಶನಿವಾರಸಂತೆ ಸಮೀಪದ ಆಲೂರುಸಿದ್ಧಾಪುರದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ತುಮಕೂರು ಸಿದ್ಧಾಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು
ಶನಿವಾರಸಂತೆ ಸಮೀಪದ ಆಲೂರುಸಿದ್ಧಾಪುರದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ತುಮಕೂರು ಸಿದ್ಧಾಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು   

ಶನಿವಾರಸಂತೆ: ಒಬ್ಬ ವ್ಯಕ್ತಿ ಜೀವನದಲ್ಲಿ ಬದುಕುವ ರೀತಿ ಮುಖ್ಯವಾಗಿದ್ದು, ಸಂಸ್ಕಾರವಂತ ಬದುಕಿನಿಂದ ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ತುಮಕೂರು ಸಿದ್ಧಾಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಆಲೂರು–ಸಿದ್ಧಾಪುರ ಗ್ರಾಮದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶತಾಯುಷಿ ಸಿದ್ಧಮಲ್ಲಯ್ಯ ಜನಾನುರಾಗಿಯಾಗಿ, ಸಮಾಜಮುಖಿಯಾಗಿ ಬದುಕು ಸಾಗಿಸಿದವರು. ಅವರ ಒಬ್ಬ ಪುತ್ರ ಅರಮೇರಿ ಕಳಂಚೇರಿ ಮಠದ ಸ್ವಾಮೀಜಿಯಾಗಿ, ಮತ್ತೊಬ್ಬರು ವಿಜ್ಞಾನಿಯಾಗಿ, ಇನ್ನೊಬ್ಬರು ಉತ್ತಮ ಆಡಳಿತಗಾರರಾಗಿ, ಇನ್ನೋರ್ವರು ವಕೀಲರಾಗಿ ಹೀಗೆ 6 ಮಂದಿ ಮಕ್ಕಳು ಸಮಾಜದಲ್ಲಿ ಸೇವೆ ಸಲ್ಲಿಸಲು ಸಮರ್ಪಿಸಿದ್ದಾರೆ. ಸಿದ್ಧಮಲ್ಲಯ್ಯ ಅವರು ತಮ್ಮ ಜೀವಿತವಧಿಯ ನೂರು ವರ್ಷಗಳಲ್ಲಿ ಜಂಗಮರಾಗಿ ಶರಣತತ್ವಗಳನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ನಡೆಸಿದವರು ಎಂದರು.

ADVERTISEMENT

ಇಂದು ಸಮಾಜ ಕಲುಷಿತಗೊಂಡಿದ್ದು ಅದನ್ನು ಆಧ್ಯಾತ್ಮಿಕತೆಯ ಮೂಲಕ ಶುದ್ಧಿಗೊಳಿಸಬೇಕು. ಮಠಮಾನ್ಯ, ದೇವಾಲಯಗಳಿಗೆ ಹೋಗುವ ಮೂಲಕ ಮನಃಶಾಂತಿ, ನೆಮ್ಮದಿ ಗಳಿಸಬಹುದು ಎಂದು ಸ್ವಾಮೀಜಿ ಕರೆ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠಾಧೀಶ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ವಿವಿಧ ಮಠಾಧೀಶರು, ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶಿವಪ್ಪ, ಗ್ರಾಮ ಮುಖಂಡ ಕೋಳಿಬೈಲ್ ಬೋಜಪ್ಪ, ಹಿರಿಯ ವಕೀಲ ಚೆನ್ನಬಸವಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.