ಸೋಮವಾರಪೇಟೆ: ತಾಲ್ಲೂಕಿನ ತೋಳೂರುಶೆಟ್ಟಳ್ಳಿ, ದೊಡ್ಡಮನೆಕೊಪ್ಪ ಗ್ರಾಮದ ಮೂಕ್ರಿಗುಡ್ಡ ಹಾಗೂ ದೊಡ್ಡಮನೆಕೊಪ್ಪ ಬೆಟ್ಟದಿಂದ ಬೃಹತ್ ಗಾತ್ರದ ಕಲ್ಲುಗಳು ಕೆಳಭಾಗಕ್ಕೆ ಉರುಳುತ್ತಿದ್ದು, ಗ್ರಾಮಸ್ಥರು ಭಯಗೊಂಡು ಕಂದಾಯ ಇಲಾಖೆಗೆ ಮಾಹಿತಿ ನೀಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
15 ವರ್ಷಗಳ ಹಿಂದೆ ಮೂಕ್ರಿಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆದಿತ್ತು. ನಂತರ ಪರಿಸರವಾದಿಗಳ ಹೋರಾಟದಿಂದ ಕಲ್ಲುಗಣಿಗಾರಿಕೆ ನಿಲ್ಲಿಸಲಾಗಿತ್ತು. ಬಂಡೆಗಳಿಂದ ಒಡೆದ ಕಲ್ಲು ಚಪ್ಪಡಿಗಳು ಅಲ್ಲಿಯೇ ಬಾಕಿಯಾಗಿದ್ದವು, ಅವುಗಳಲ್ಲಿ ಕೆಲವು ಕಲ್ಲುಗಳು ಕಾಫಿ ತೋಟದೊಳಗೆ ಉರುಳಿ ಗಿಡಗಳಿಗೆ ಹಾನಿಯಾಗಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
ಗುರುವಾರ ಕಂದಾಯ ಪರಿವೀಕ್ಷಕ ದಾಮೋದರ್ ಮತ್ತು ಗ್ರಾಮಲೆಕ್ಕಿಗ ಕರಿಬಸಪ್ಪ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದರು. ಕಲ್ಲು ಉರುಳಿರುವ ಜಾಗದಲ್ಲಿ ಮನೆಗಳಿಲ್ಲದಿರುವುದರಿಂದ ತಕ್ಷಣಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಬೆಟ್ಟದಿಂದ 200 ಮೀಟರ್ ಕೆಳಭಾಗಕ್ಕೆ ಕಲ್ಲು ಉರುಳಿವೆ. ಮನೆಗಳ ಸಮನಾಂತರವಾಗಿ ಯಾವುದೆ ಕಲ್ಲುಗಳಿಲ್ಲ. ಕಾಫಿ ತೋಟಗಳಲ್ಲಿ ಕಾಫಿ ಗಿಡುಗಳು ಮತ್ತು ಮರಗಳಿಗೆ ಹಾನಿಯಾಗಿದೆ. ಗ್ರಾಮ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕಂದಾಯ ಅಧಿಕಾರಿ ಹೇಳಿದರು. ತಹಶೀಲ್ದಾರ್ ಮತ್ತು ಭೂಗರ್ಭಶಾಸ್ತ್ರಜ್ಞರಿಗೆ ವರದಿ ಸಲ್ಲಿಸಿದ್ದು, ಹಿರಿಯ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರಾದ ನಾಗರಾಜು, ಧರ್ಮಪ್ಪ, ಡಿ.ಕೆ.ಉಮೇಶ್, ಶಂಕರಪ್ಪ, ಲಕ್ಷ್ಮಣ, ಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.