ಸುಂಟಿಕೊಪ್ಪ: ಇಲ್ಲಿನ ಜಿ ಯಂ.ಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘ ಆಯೋಜಿಸಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಮಂಗಳವಾರ ನಡೆದ ಪಂದ್ಯದಲ್ಲಿ ಅಶೋಕ ಎಫ್.ಸಿ.ಮೈಸೂರು ಮತ್ತು ಸಿಟಿಜನ್ ಎಫ್.ಸಿ ಉಪ್ಪಳ ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ಮೊದಲ ಪಂದ್ಯವು ಫೈಟರ್ಸ್ ಎಫ್.ಸಿ ಕೂತ್ತುಪರಂಬು ಮತ್ತು ಅಶೋಕ ಎಫ್.ಸಿ.ಮೈಸೂರು ತಂಡಗಳ ನಡುವೆ ನಡೆಯಿತು. ಬಲಿಷ್ಠ ಆಟಗಾರರನ್ನು ಒಳಗೊಂಡ ಎರಡು ತಂಡಗಳೂ ಮನರಂಜಿಸಿದವು. ಮೈಸೂರು ತಂಡದ ಆಟಗಾರರ ಚಾಕಚಕ್ಯತೆಯ ಪಾಸ್ಗಳ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಅಶೋಕ ತಂಡದ ಆಟಗಾರ ಹೊಡೆದ ಚೆಂಡನ್ನು ಹೊರಹಾಕಲು ಪ್ರಯತ್ನಿಸಿದ ಕೂತ್ತುಪರಂಬು ತಂಡದ ಆಟಗಾರ ಶಬೀಬ್ ತಮ್ಮ ತಂಡದ ಗೋಲುಪಟ್ಟಿಯೊಳಗೆ ಹೊಡೆದು ಸ್ವ–ಗೋಲು ಆದಾಗ ಮೈಸೂರು ತಂಡ ಮುನ್ನಡೆ ಪಡೆಯಿತು.
2 ತಂಡಗಳ ನಡುವೆ ಸಮಬಲದ ಪೈಪೋಟಿ ನಡೆಯಿತು. ಒಂದು ಹಂತದಲ್ಲಿ ಮೈಸೂರು ತಂಡದ ಆಟಗಾರರು ಚೆಂಡನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೂತ್ತುಪರಂಬು ತಂಡ ಚೆಂಡಿಗಾಗಿ ಪರದಾಡುವಂತೆ ಮಾಡಿದರು. ಮೈಸೂರು ತಂಡ ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಪಡೆದುಕೊಂಡಿತು.
ದ್ಚಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಕೂತ್ತುಪರಂಬು ತಂಡ ಮೈಸೂರು ತಂಡದ ಆಟಗಾರರನ್ನು ಕಣ್ತಪ್ಪಿಸಿ ಗೋಲುಪಟ್ಟಿಗೆ ಹೊಡೆದರೂ ಗೋಲುಕೀಪರ್ ಆಕರ್ಷಕ ಹಿಡಿತದಿಂದ ವಿಫಲಗೊಳಿಸಿದರು. ಈ ಹಂತದಲ್ಲಿ ಮೈಸೂರು ತಂಡ ಸಂಪೂರ್ಣವಾಗಿ ಚೆಂಡಿನಲ್ಲಿ ಹತೋಟಿ ಸಾಧಿಸಿತು. ಉತ್ತಮ ಪಾಸ್ ಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದ ಮೈಸೂರು ತಂಡ, ಪಂದ್ಯದ 10 ನಿಮಿಷದಲ್ಲಿ ಭಗತ್ ಅವರು ಆಕರ್ಷಕ ಗೋಲು ಬಾರಿಸಿದರು.
ಕೂತ್ತುಪರಂಬು ತಂಡದ ಶಿಯಾಬ್ 13 ನಿಮಿಷದಲ್ಲಿ ಎದುರಾಳಿ ಆಟಗಾರರ ಕಣ್ತಪ್ಪಿಸಿ ಆಕರ್ಷಕ ಗೋಲನ್ನು ಹೊಡೆದರು. ಇದರೊಂದಿಗೆ ಕ್ರೀಡಾಭಿಮಾನಿಗಳ ಬೊಬ್ಬೆ ಮುಗಿಲು ಮುಟ್ಟಿತು. ಕೊನೆಯಲ್ಲಿ ಅಶೋಕ ಎಫ್.ಸಿ.ಮೈಸೂರು ತಂಡವು ಫೈಟರ್ಸ್ ಎಫ್ಸಿ ಕೂತ್ತುಪರಂಬು ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ದಿನದ ಎರಡನೇ ಪಂದ್ಯವು ಸಿಟಿಜನ್ ಎಫ್.ಸಿ.ಉಪ್ಪಳ ಮತ್ತು ನೇತಾಜಿ ಎಫ್.ಸಿ ಮಂಡ್ಯ ತಂಡಗಳ ನಡುವೆ ನಡೆಯಬೇಕಾಗಿತ್ತು. ಆದರೆ ಮಂಡ್ಯ ತಂಡ ಮೈದಾನಕ್ಕೆ ಬರದ್ದರಿಂದ ವಾಕ್ ಓವರ್ ಮೂಲಕ ಉಪ್ಪಳ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹದ ಉಪಾಧ್ಯಕ್ಷ ಶ್ರೀರಾಮ್ ಚೆಂಡು ಒದೆಯುವುದರ ಮೂಲಕ ಫುಟ್ಬಾಲ್ ಪಂದ್ಯಕ್ಕೆ ಚಾಲನೆ ನೀಡಿದರು. 33 ವರ್ಷಗಳಿಂದ. ಸಿಟಿಜನ್ ಎಫ್.ಸಿ.ಉಪ್ಪಳ ತಂಡವನ್ನು ಸುಂಟಿಕೊಪ್ಪ ಫುಟ್ಬಾಲ್ ಟೂರ್ನಿಗೆ ಕರೆ ತರುತ್ತಿರುವ ತಂಡದ ವ್ಯವಸ್ಥಾಪಕ ಅಶ್ರಫ್ ಅವರನ್ನು ಮೈದಾನದಲ್ಲಿ ಸನ್ಮಾನಿಸಲಾಯಿತು. ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆಯ ಮೂಲಕ ಅಭಿನಂದಿಸಿದರು.
ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ವಾಸುದೇವ, ಜಾನ್, ಹಮೀದ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ರಫೀಕ್ ಖಾನ್ ಇದ್ದರು.
ಇಂದಿನ ಪಂದ್ಯಗಳು
* ಮಧ್ಯಾಹ್ನ 3 ಗಂಟೆಗೆ ಸಿಟಿಜನ್ ಎಫ್.ಸಿ. ಉಪ್ಪಳ ಮತ್ತು ಬೆಟ್ಟಗೇರಿ ಎಫ್.ಸಿ. ಬೆಟ್ಟಗೇರಿ
* ಸಂಜೆ 4 ಗಂಟೆಗೆ ವಿಜಯನಗರ ಎಫ್. ಸಿ. ಮೈಸೂರು ಮತ್ತು ಟಿಬೆಟಿಯನ್ ತಂಡ ಬೈಲುಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.