ADVERTISEMENT

ಶಿವಲಿಂಗ ವಿಸರ್ಜನೆಗೆ ಕೋರ್ಟ್‌ ತಡೆ

ತಲಕಾವೇರಿ: ಮುಂದುವರಿದ ಲಿಂಗ ವಿಸರ್ಜನೆ ಗೊಂದಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 20:02 IST
Last Updated 10 ಏಪ್ರಿಲ್ 2019, 20:02 IST
ತಲಕಾವೇರಿ ಕ್ಷೇತ್ರ 
ತಲಕಾವೇರಿ ಕ್ಷೇತ್ರ    

ಮಡಿಕೇರಿ: ಮುಜರಾಯಿ ಇಲಾಖೆ ವ್ಯಾಪ್ತಿಯ ತಲಕಾವೇರಿ ಕ್ಷೇತ್ರದಲ್ಲಿರುವ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆಗೆ ಮುಂದಾಗಿದ್ದ ಕ್ರಮಕ್ಕೆ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಲಕಾವೇರಿ ಕ್ಷೇತ್ರದ ಅಗಸ್ತೇಶ್ವರ ದೇಗುಲದ ಬಳಿ ಭೂಸಮಾಧಿಯಾಗಿದ್ದ ಲಿಂಗವನ್ನು ಕೆಲವು ತಿಂಗಳ ಹಿಂದೆ ಹೊರ ತೆಗೆಯಲಾಗಿತ್ತು. ಅದು ಭಿನ್ನವಾಗಿದೆ ಎಂಬ ಕಾರಣಕ್ಕೆ ಪೂಂಪ್‌ಹಾರ್‌ನಲ್ಲಿ ಸಮುದ್ರಕ್ಕೆ ವಿಸರ್ಜಿಸಲು ತೀರ್ಮಾನಿಸಲಾಗಿತ್ತು.

ಈಗ ತಲಕಾವೇರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಏ.11 ಅಥವಾ 12ರಂದು ಲಿಂಗವನ್ನು ವಿಸರ್ಜನೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು. ತಲಕಾವೇರಿಯಲ್ಲಿ ಶಿವಲಿಂಗ ವಿಚಾರವಾಗಿ ಗ್ರಾಮಸ್ಥರು ಮತ್ತು ದೇವಾಲಯ ಸಮಿತಿ ನಡುವೆ ಹಗ್ಗಜಗ್ಗಾಟಕ್ಕೂ ಕಾರಣವಾಗಿತ್ತು. ಈಗ ಈ ಗೊಂದಲವು ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.

ADVERTISEMENT

ಲಿಂಗ ತೆಗೆದು ವಿಸರ್ಜನೆ ಮಾಡುತ್ತಿರುವ ಕಾರಣ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಮಳೆ–ಬೆಳೆಯೂ ಚೆನ್ನಾಗಿ ಆಗುತ್ತಿಲ್ಲ ಎಂದು ಒಂದು ಬಣದ ಭಕ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಆಕ್ರೋಶ: ಕೆಲವರ ರಾಜಕೀಯದಿಂದ ಗೊಂದಲವಾಗುತ್ತಿದೆ. ಅವರಿಗೆ ಬೇಕಾದವರಿಂದ ಅಷ್ಟಮಂಗಲ ಆಯೋಜಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲಿಂಗ ವಿಸರ್ಜನೆಗೆ ಕೆಲವರು ವಿರೋಧಿಸಿದ್ದರು.

‘ವಸ್ತುಸಂಗ್ರಹಾಲಯಕ್ಕೆ ನೀಡಬಹುದು’

ಈ ನಡುವೆ ತಲಕಾವೇರಿಗೆ ಕೆಲವು ದಿನಗಳ ಹಿಂದೆ ಬಂದಿದ್ದ ಕೇಂದ್ರ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು, ‘ರಚನಾ ಶೈಲಿ ವೀಕ್ಷಿಸಿದರೆ ಲಿಂಗ ಗಂಗರ ಕಾಲದ್ದು ಎನ್ನಬಹುದು. ಒಂದು ಸಾವಿರ ವರ್ಷಗಳ ಹಳೆಯ ಲಿಂಗ ಆಗಿರುವ ಸಾಧ್ಯತೆಯಿದೆ. ಮತ್ತಷ್ಟು ಸೂಕ್ಷ್ಮ ಅಧ್ಯಯನ ಅಗತ್ಯ. ತಂತ್ರಿಗಳು ಅವಕಾಶ ನೀಡಿದರೆ ಅದನ್ನು ವಸ್ತುಸಂಗ್ರಹಾಲಯಕ್ಕೆ ಕಳುಹಿಸಬಹುದು’ ಎಂದು ಸಮಿತಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.