ADVERTISEMENT

ಮೌನದಲ್ಲೇ ತಿವಿದ ರೈತರು!

ಸೋಮವಾರಪೇಟೆಯಲ್ಲಿ ರೈತ ಹೋರಾಟ ಸಮಿತಿ ವತಿಯಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 5:44 IST
Last Updated 20 ಆಗಸ್ಟ್ 2024, 5:44 IST
ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ವತಿಯಿಂದ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಪಟ್ಟಣದಲ್ಲಿ ರೈತರ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸೋಮವಾರಪೇಟೆ ತಾಲ್ಲೂಕು ರೈತ ಹೋರಾಟ ಸಮಿತಿ ವತಿಯಿಂದ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಪಟ್ಟಣದಲ್ಲಿ ರೈತರ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿ ಜಾರಿ ಬೇಡ, ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಭೂಮಿಗೆ ಹಕ್ಕುಪತ್ರ ನೀಡಲೇಬೇಕು ಎಂದು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೋಮವಾರ ಇಲ್ಲಿ ಮೌನವಾಗಿಯೇ ಪ್ರತಿಭಟನೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿದರು.

ತಾಲ್ಲೂಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಹಾಗೂ ಪಟ್ಟಣದ ವರ್ತಕರೂ ಒಂದು ಗಂಟೆಗಳ ಕಾಲ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಬೆಂಬಲ ಸೂಚಿಸಿದ್ದು ವಿಶೇಷ ಎನಿಸಿತ್ತು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಿಂದ ಆರಂಭವಾದ ಜಾಥಾ, ವಿವೇಕಾನಂದ ವೃತ್ತದ ಮೂಲಕ ಮಡಿಕೇರಿ ರಸ್ತೆಯಲ್ಲಿ ಸಾಗಿ, ಜೆ.ಸಿ.ವೇದಿಕೆಯನ್ನು ಸೇರಿತು. 

ADVERTISEMENT

ದಾರಿಯುದ್ಧಕ್ಕೂ ನೂರಾರು ಭಿತ್ತಿಪತ್ರಗಳನ್ನಿಡಿದುಕೊಂಡ ರೈತರು ಗಮನ ಸೆಳೆದರು. ಒಂದೊಂದು ಭಿತ್ತಿಪತ್ರವೂ ರೈತರ ಸಂಕಷ್ಟಗಳನ್ನು ಧ್ವನಿಸುವಂತಿತ್ತು.

‘ಹಸಿರನ್ನು ಉಳಿಸುವವನು ರೈತನೇ ಹೊರತು ಯಾವ ಅಧಿಕಾರಿಯೂ ಅಲ್ಲ’, ‘ದೇಶಕ್ಕೆ ಅನ್ನ ಕೊಟ್ಟ ರೈತರನ್ನು ಮರೆಯದಿರಿ’, ‘ರೈತ ಉಳಿದರೆ ದೇಶ ಉಳಿದಂತೆ’, ‘ರಕ್ಷಿಸಿ ರಕ್ಷಿಸಿ ರೈತರನ್ನು ರಕ್ಷಿಸಿ’ ಎಂಬಿತ್ಯಾದಿ ಬರಹಗಳು ಗಮನ ಸೆಳೆದವು.

‘ಸರ್ಕಾರದ ಆದೇಶದಂತೆ 1975ರಲ್ಲಿ ತಾಲ್ಲೂಕಿನಲ್ಲಿ 25,900 ಎಕರೆ ಜಾಗವನ್ನು ‘ಸಿ’ ಮತ್ತು ‘ಡಿ’ ಎಂದು ಗುರುತಿಸಿ, ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಎಂದು ತಿಳಿಸಿದೆ. 1977ರಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ನಂತರ, ಸಣ್ಣ ಮಟ್ಟದ ಹೋರಾಟದ ನಂತರ 1985ರಲ್ಲಿ ಮರುಪರಿಶೀಲನೆಗೆ ಸರ್ಕಾರದಿಂದ ಆದೇಶವಾಯಿತು. ಆ ಸಮಯದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಕಚೇರಿಯಲ್ಲೇ ಕುಳಿತುಕೊಂಡು ಅವೈಜ್ಞಾನಿಕ ವರದಿ ನೀಡಿರುವುದರಿಂದ ರೈತರು ಈಗ ಆಸ್ತಿ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ’ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ದೂರಿದರು.

ಹೋರಾಟಗಾರ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಸುಪ್ರಿಂಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸಬೇಕಿರುವುದರಿಂದ ಕೂಡಲೇ ಕಾರ್ಯಪ್ರವೃತರಾಗಬೇಕಿದೆ. ವಿಳಂಬ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಎಚ್ಚರಿಸಿದರು.

ಹಿರಿಯ ವಕೀಲ ಬಿ.ಜೆ.ದೀಪಕ್, ಸಾಮಾಜಿಕ ಹೋರಾಟಗಾರ ಬಿ.ಪಿ.ಅನಿಲ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ರೈತ ಮುಖಂಡ ಎಸ್.ಬಿ.ಭರತ್ ಕುಮಾರ್ ಮಾತನಾಡಿದರು.

ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ನಡೆದ ರೈತ ಹೋರಾಟಗಾರರ ಬಹಿರಂಗ ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಡಾ.ಮಂತರ್‌ಗೌಡ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಎಂ.ಪಿ.ಅಪ್ಪಚ್ಚುರಂಜನ್ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಸಿಎಂ ಭೇಟಿ ಮಾಡಲು ನಿಯೋಗಕ್ಕೆ ಅವಕಾಶ;

ಮಂತರ್‌ಗೌಡ ‘ಸಿ’ ಮತ್ತು ‘ಡಿ’ ಜಮೀನಿನ ಸಮಸ್ಯೆ ಕುರಿತು ಪರಿಹಾರ ಕಂಡು ಕೊಳ್ಳಲು ಜಿಲ್ಲೆಯ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ನಮ್ಮ ಕುಟುಂಬವೂ ರೈತ ಕುಟುಂಬವಾಗಿದ್ದು ರೈತ ಹೋರಾಟ ಸಮಿತಿಯ ಸದಸ್ಯನಾಗಿ ನಿಮ್ಮೊಂದಿಗೆ ಹೋರಾಟದಲ್ಲಿ ಭಾಗಿಯಾಗುತ್ತೇನೆ. ರಾಜಕೀಯರಹಿತ ಹೋರಾಟ ಮಾಡಲು ಸಿದ್ಧ’ ಎಂದು ಘೋಷಿಸಿದರು. ನೂರಾರು ವರ್ಷಗಳಿಂದ ರೈತರು ಕೃಷಿ ಮಾಡಿಕೊಂಡು ಜೀವನ ಕಂಡುಕೊಂಡಿರುವ ಭೂಮಿಗೆ ಹಕ್ಕುಪತ್ರ ಸಿಗಲೇಬೇಕು. ‘ಸಿ’ ಮತ್ತು ‘ಡಿ’ ಜಾಗದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳು ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರ ರೈತರ ಪರವಾಗಿ ಸುಪ್ರಿಂಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸುವಂತೆ ಮಾಡಲಾಗುವುದು ಎಂದರು.

ತೆರವು ಮಾಡಲು ಬಿಡುವುದಿಲ್ಲ; ಅಪ್ಪಚ್ಚುರಂಜನ್

ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ‘ಯಾವುದೇ ಕಾರಣಕ್ಕೂ ‘ಸಿ’ ಮತ್ತು ‘ಡಿ’ ಭೂಮಿಯನ್ನು ರೈತರಿಂದ ತೆರವು ಮಾಡಿಸಲು ಬಿಡುವುದಿಲ್ಲ’ ಎಂದು ಘೋಷಿಸಿದರು. ‘ಇದು ರೈತರ ಹಕ್ಕು. ಇದರ ಉಳಿವಿಗೆ ಪಕ್ಷಾತೀತ ಹೋರಾಟ ಮಾಡಲು ಸದಾ ಸಿದ್ದ. ಹಿಂದೆಯೂ ಮಲೆನಾಡಿನ ಶಾಸಕರೆಲ್ಲ ಸೇರಿ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದೆವು. ಈಗಲೂ ಪ್ರತಿಭಟನೆ ಮಾಡಲು ಸಿದ್ಧ’ ಎಂದರು. ‘ಸಿ’ ಮತ್ತು ‘ಡಿ’ ಭೂಮಿಯನ್ನು ಅರಣ್ಯ ಮಾಡಬೇಕು ಎನ್ನುವ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳಲು ಅರಣ್ಯ ಸಚಿವರಿಗೆ ಅಧಿಕಾರ ಇದೆ. ಒಂದು ವೇಳೆ ಅವರು ವಾಪಸ್ ತೆಗೆದುಕೊಳ್ಳದೇ ಹೋದರೆ ಇನ್ನಷ್ಟು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ‘ನಮ್ಮ ಸರ್ಕಾರ ಇದ್ದಾಗ ಅತಿ ಹೆಚ್ಚು ರೈತರ ಕೃಷಿ ಭೂಮಿಗೆ ಭೂ ದಾಖಲಾತಿ ಮಾಡಿಕೊಟ್ಟಿತ್ತು’ ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.