ವಿರಾಜಪೇಟೆ: ವಿದ್ಯಾರ್ಥಿಗಳು ಹಾಕುವ ಶ್ರಮವು ಕೇವಲ ಅವರ ಭವಿಷ್ಯವನ್ನು ಮಾತ್ರವಲ್ಲ, ಒಂದು ಸಂಪೂರ್ಣ ಕುಟುಂಬದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ಸಿ.ಇ.ಟಿ ತರಬೇತುದಾರ ಪ್ರಶಾಂತ್ ರಾವ್ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಚಾಣಕ್ಯ ಕೋಚಿಂಗ್ ಕೇಂದ್ರದ ಸಹಯೋಗದೊಂದಿಗೆ ಬುಧವಾರ ನಡೆದ ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷೆಯ ಮಹತ್ವ ಹಾಗೂ ಸಿದ್ಧತೆಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿರುವ ಕೊರತೆಗಳು ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಿದೆ. ಗ್ರಾಮೀಣ ವಿದ್ಯಾರ್ಥಿಗಳೂ ಬುದ್ಧಿವಂತರಾಗಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೇ ಉತ್ತಮ ಅಂಕ ಗಳಿಸುತ್ತಾರೆ. ಆದರೆ ಅಗತ್ಯ ಸಿದ್ಧತೆ ಇಲ್ಲವಾದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಲ್ಲಿ ವಿಫಲವಾಗುತ್ತಾರೆ. ಇದರಿಂದ ರಾಜ್ಯ ಹಾಗೂ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿರಾಗುತ್ತಾರೆ’ ಎಂದರು.
‘ಶ್ರಮಕ್ಕೆ ಪರ್ಯಾಯವಾದ ಮತ್ತೊಂದು ಮಾರ್ಗವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭ ತೊಡಗಿಸಿದ ಶ್ರಮಕ್ಕೆ ಖಂಡಿತವಾಗಿ ಪ್ರತಿಫಲ ಇದ್ದೆ ಇರುತ್ತದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಅವರು ಮಾತನಾಡಿ, ‘ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗಬಾರದು. ಬದುಕಿನಲ್ಲಿ ಶಿಸ್ತು ಇದ್ದರೆ ಮಾತ್ರ ಭವಿಷ್ಯದಲ್ಲಿ ಗುರಿ ಸಾಧನೆ ಸಾಧ್ಯ. ತಮ್ಮ ಓದು, ತಂದೆ–ತಾಯಿಗಾಗಲಿ ಅಥವಾ ಶಿಕ್ಷಕರಿಗಾಗಿ ಅಲ್ಲ ತಮ್ಮ ಭವಿಷ್ಯಕ್ಕೆ ಎನ್ನುವುದನ್ನು ವಿದ್ಯಾರ್ಥಿಗಳು ಮೊದಲು ಮನಗಾಣಬೇಕು’ ಎಂದರು.
‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರೆ, ಉತ್ತಮ ಉದ್ಯೋಗ ಪಡೆದು ಭದ್ರವಾದ ಭವಿಷ್ಯ ರೂಪಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದು’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಹೇಮಂತ್, ಉಪನ್ಯಾಸಕಿಯರಾದ ರಶ್ಮಿ ಬಿ.ಎಂ., ಅಶ್ವಿನಿ ಅವರು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಜೋಮೋನ್ ಥೋಮಸ್, ನೋಹ ವಿವೇಕ್, ಜಯಿದ್ ಹಾಗೂ ಮೋಹನಾಕ್ಷಿ ಅವರು ಉಪಸ್ಥಿತರಿದ್ದರು.
‘ಮೊಬೈಲ್ ಟಿವಿ ವೀಕ್ಷಣೆ ತ್ಯಾಗ ಮಾಡಿ’
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣದ ಎರಡು ವರ್ಷಗಳನ್ನು ತಪಸ್ಸಿನಂತೆ ಪೂರ್ಣಗೊಳಿಸಬೇಕು. ಹಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಮೊಬೈಲ್ ಟಿ.ವಿ ನೋಡುವುದನ್ನು ವಿದ್ಯಾರ್ಥಿಗಳು ತ್ಯಾಗ ಮಾಡಲು ಸಿದ್ಧರಾಗಬೇಕು. ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು. ಪೋಷಕರು ಈ ಕುರಿತು ಗಮನಹರಿಸಬೇಕು. ವಿದ್ಯಾರ್ಥಿಯೊಬ್ಬ ಗುರಿ ಸಾಧಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಸಮಾನವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.