ವಿರಾಜಪೇಟೆ: ಐದು ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹಸನ್ ಕೊಲೆ ಪ್ರಕರಣದ ಪ್ರಮುಖ ಮೂವರು ಅಪರಾಧಿಗಳಿಗೆ ಇಲ್ಲಿನ 2ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 1.60 ಲಕ್ಷ ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದೆ.
ಪ್ರಕರಣದ ಆರೋಪಿಗಳಾದ ಕೆ.ಯು.ಅನೀಶ್, ಕೆ.ಎ.ಮೂಸನ್ ಹಾಗೂ ಪಿ.ಎಂ.ನಜೀರ್ ಶಿಕ್ಷೆಗೆ ಒಳಗಾದವರು.5ನೇ ಆರೋಪಿ ಕೆ.ಎ.ಉಸ್ಮಾನ್ಗೆ ₹ 5 ಸಾವಿರ ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದ ಅಜ್ಮುದ್ದೀನ್ ಆರೋಪ ಮುಕ್ತಗೊಂಡಿದ್ದಾರೆ.
2014ರ ಸೆ.17ರಂದು ಪಟ್ಟಣದ ಗಡಿಯಾರ ಕಂಬದ ಬಳಿಯ ಹೋಟಲ್ವೊಂದರಲ್ಲಿ ಇಕ್ಬಾಲ್ ಹಸನ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭ ಹೋಟಲ್ನಲ್ಲಿದ್ದ ಚಂದ್ರಶೇಖರ್ ಕಾಲಿಗೂ ಗುಂಡು ತಗುಲಿತ್ತು. 5 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾಗಿ ನಾರಾಯಣ ಅವರು ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.