ADVERTISEMENT

29ರಿಂದ ಲೋಕ ಕಲ್ಯಾಣಾರ್ಥ ಯಾಗ, ರಥಯಾತ್ರೆ

ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 10:57 IST
Last Updated 17 ಡಿಸೆಂಬರ್ 2018, 10:57 IST

ಮಡಿಕೇರಿ: ‘ಲೋಕ ಕಲ್ಯಾಣಾರ್ಥವಾಗಿ ಡಿ.29 ಹಾಗೂ 30ರಂದು ತಾಲ್ಲೂಕಿನ ಹೊದ್ದೂರು ಗ್ರಾಮದ ಕಣ್ವಮುನೀಶ್ವರ ಕ್ಷೇತ್ರದಲ್ಲಿ ಗಾಯತ್ರಿ ಪುನಃಶ್ಚರಣಾ ಯಾಗ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಹಬಲೇಶ್ವರಭಟ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾವೇರಿ ಮಾತೆ ಶುದ್ಧತೆ, ಕೊಡಗಿನಲ್ಲಿ ಸಂಭವಿಸಿದ್ದ ದುರಂತ ಇನ್ಮುಂದೆ ಸಂಭವಿಸದಿರಲಿ ಹಾಗೂ ಲೋಕ ಕಲ್ಯಾಣದ ಉದ್ದೇಶದಿಂದ ಈಯಾಗ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಅಂಗರಕಟ್ಟೆ ಬಾಳೆಕುದ್ರು ಶ್ರೀಮಠದ ನರಸಿಂಹ ಆಶ್ರಮದ ಪೀಠಾಧ್ಯಕ್ಷ ಶ್ರೀನರಸಿಂಹ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ 10 ಹೋಮದ ಕುಂಡ ಬಳಸಿ 50 ಅರ್ಚಕರು ಪೂಜಾ ಕೈಂಕರ್ಯ ನಡೆಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಕೋರಿದರು.

ADVERTISEMENT

ಯಾಗದ ಅಂಗವಾಗಿ ಡಿ. 23ರಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ತಲಕಾವೇರಿಯಿಂದ ಆರಂಭವಾಗುವ ಯಾತ್ರೆ ಭಾಗಮಂಡಲ, ಚೇರಂಬಾಣೆ, ಬೆಟ್ಟಗೇರಿ ಮಾರ್ಗವಾಗಿ ಕಕ್ಕಬೆಪಾಡಿ ಇಗ್ಗುತ್ತಪ್ಪ ದೇವಸ್ಥಾನ ತಲುಪಲಿದೆ ಎಂದು ವಿವರಿಸಿದರು.

ಮಧ್ಯಾಹ್ನದ ನಂತರ ಚೆಯ್ಯಂಡಾಣೆ, ಕರಡ, ಕಡಂಗ, ಪಾರಣೆ, ಬಲಮುರಿ ಮಾರ್ಗವಾಗಿ ಮೂರ್ನಾಡಿ ತಲುಪಲಿದೆ ಎಂದು ತಿಳಿಸಿದರು.

ಡಿ.24ರಂದು ಬೆಳಿಗ್ಗೆ 7.30ಕ್ಕೆ ಮೂರ್ನಾಡಿನಿಂದ ವಿರಾಜಪೇಟೆ–ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಕಾನೂರು, ಬಾಳೆಲೆ ಮಾರ್ಗವಾಗಿ ಸಿದ್ದಾಪುರ ತಲುಪಲಿದೆ. ಡಿ. 25ರಂದು ಸಿದ್ದಾಪುರದಿಂದ ಚೆಟ್ಟಳ್ಳಿ– ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ರಾಮೇಶ್ವರ, ಆಲೂರು ಸಿದ್ದಾಪುರ, ಕೊಡ್ಲಿಪೇಟೆ, ಶನಿವಾರಸಂತೆ ಮಾರ್ಗವಾಗಿ ಸೋಮವಾರಪೇಟೆ ತಲುಪಲಿದೆ ಎಂದು ತಿಳಿಸಿದರು.

26ರಂದು ಬೆಳಿಗ್ಗೆ ಸೋಮವಾರಪೇಟೆಯಿಂದ ಮಾದಾಪುರ, ಮಡಿಕೇರಿ, ಸಂಪಾಜೆ ಹಾಗೂ ಮೇಕೇರಿ, ಮರಗೋಡು, ಐಕೋಳ, ಕೊಂಡಂಗೇರಿ ಮಾರ್ಗವಾಗಿ ಬಲಮುರಿಯಲ್ಲಿ ರಥಯಾತ್ರೆ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಜಿ ಎಚ್‌.ಆರ್‌. ಮುರಳಿ, ಸದಸ್ಯರಾದ ಶ್ರೀಶಕುಮಾರ್, ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.