ADVERTISEMENT

ಅರೆ ನೀರಾವರಿಯಲ್ಲಿ ಭತ್ತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:05 IST
Last Updated 22 ಸೆಪ್ಟೆಂಬರ್ 2011, 7:05 IST

ಮಾಲೂರು: ಅರೆ ನೀರಾವರಿ ಪದ್ಧತಿ ಅಳವಡಿಸಿ ಭತ್ತ ಬೆಳೆದಿರುವ ತಾಲ್ಲೂಕಿನ ದೊಡ್ಡಮಲ್ಲೇ ಗ್ರಾಮದ ರೈತ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯತ್ನ ಮಾಡುವಲ್ಲಿ ಮುಂದಾಗಿದ್ದಾರೆ.

ತಾಲ್ಲೂಕಿನ ರೈತರು ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿಲ್ಲದೆ ಭತ್ತ ಬೆಳೆಯುವಲ್ಲಿ ವಿಫಲರಾಗಿದ್ದಾರೆ. ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ರಾಗಿ ನಾಟಿ ಮಾಡಿದ್ದಾರೆ.

ಆದರೆ ಅರಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಲ್ಲೇ ಗ್ರಾಮದ ರೈತ ಜಯರಾಮರಾಜ್ ತನ್ನ ಒಂದು ಎಕರೆ ಭೂಮಿಯಲ್ಲಿ ಪಯೋನಿಯರ್ ಹೈಬ್ರೀಡ್ ಜಾತಿ ತಳಿ ಭತ್ತ ನಾಡಿ ಮಾಟಿದ್ದಾರೆ.

ಅರೆ ನೀರಾವರಿ ಪದ್ಧತಿಯಿಂದ ಉತ್ತಮ ಬೆಳೆ ಬೆಳೆದಿದ್ದಾರೆ. ತಮ್ಮ ಭೂಮಿಯಲ್ಲಿನ ಕೊಳವೆ ಬಾವಿಯಲ್ಲಿರುವ ಅಲ್ಪ ಪ್ರಮಾಣದ ನೀರಿನಿಂದ ಒಂದು ಎಕರೆ ಭೂಮಿಯಲ್ಲಿ ಭತ್ತ ನಾಟಿ ಮಾಡಿದ್ದಾರೆ. ಅರ್ಧ ಎಕರೆಯಲ್ಲಿ ಕೆಸರು ಮಾಡಿ ಭತ್ತ ನಾಟಿ ಮಾಡುವ ಮೂಲಕ ಪೂರ್ಣ ಪ್ರಮಾಣದಲ್ಲಿ ನೀರು ಹಾಯಿಸುತ್ತಿದ್ದಾರೆ.

ಉಳಿದ ಅರ್ಧ ಎಕರೆಯಲ್ಲಿ ನಾಟಿ ಮಾಡಿರುವ ಭತ್ತಕ್ಕೆ ಅವಶ್ಯಕತೆ ಇರುವಷ್ಟು ನೀರನ್ನು ತರಕಾರಿ ಬೆಳೆಗೆ ನೀಡುವಂತೆ ನೀರನ್ನು ಹರಿಸುತ್ತಿದ್ದು, ಭೂಮಿ ಒಣಗಿದ್ದಾಗ ಮಾತ್ರ ತೇವ ಮಾಡಲಾಗುತ್ತಿದೆ. ಪೈರಿನಿಂದ ಪೈರಿಗೆ ಮುಕ್ಕಾಲು ಅಡಿ ಅಂತರ ಇರುವುದರಿಂದ ಪೈರು ಉತ್ತಮವಾಗಿ ಬೆಳೆಯಲು ಅನುಕೂಲವಾಗಿದೆ. ಪೈರುಗಳಲ್ಲಿ 40ರಿಂದ 50 ತೆಂಡೆ ಹೊಡೆದು ಉತ್ತಮ ಇಳುವರಿ ಉಂಟಾಗಿದೆ.

ತಾಲ್ಲೂಕಿನ ರೈತರು ಅರೆ ನೀರಾವರಿ ಭತ್ತ ಪದ್ಧತಿ ಅಳವಡಿಸಿ ಭತ್ತ ಬೆಳೆಯುವುದರಿಂದ ಶೇ.70ರಷ್ಟು ನೀರನ್ನು ಉಳಿಸುವ ಜತೆ, ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸಬಹುದು. ಈ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.