ADVERTISEMENT

ಅವಳಿ ಜಿಲ್ಲೆ ಬಂದ್; ಜಿಲ್ಲೆಯಾದ್ಯಂತ ಪೂರ್ಣ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:30 IST
Last Updated 12 ಫೆಬ್ರುವರಿ 2011, 6:30 IST

ಮಾಲೂರು: ನೀರಿನ ಅಂತರ್ಜಲ ಮಟ್ಟ 1200 ಅಡಿ ಕೆಳಮಟ್ಟಕ್ಕೆ ಇಳಿದಿದ್ದು, ನೀರಿಗಾಗಿ ಹೋರಾಟ ಹಮ್ಮಿಕೊಳ್ಳಬೇಕಾಗಿದೆ ಎಂದು ಶಾಶ್ವತ ನೀರಾವರಿ ಸಮಿತಿ ಸದಸ್ಯ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಫೆ. 14ರಂದು ನಡೆಯಲಿರುವ ಕೋಲಾರ- ಚಿಕ್ಕಬಳ್ಳಾಪುರ ಅವಳಿ ಜಿಲ್ಲೆ ಬಂದ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಟೆಂಪೊ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಆಟೊ ಚಾಲಕರ ಸಂಘದ ಅಧ್ಯಕ್ಷ ಬಡಗಿ ಶ್ರೀನಿವಾಸ್ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿದರು. ಕೋಮುಲ್ ನಿರ್ದೇಶಕ ಡಾ.ಎ.ವಿ.ಪ್ರಸನ್ನ,  ಕರವೇ ಜಿಲ್ಲಾಧ್ಯಕ್ಷ ರಾಜ್‌ಗೋಪಾಲ್‌ಗೌಡ, ತಾಲ್ಲೂಕು ಅಧ್ಯಕ್ಷ ಎಸ್.ಪ್ರಕಾಶ್, ನರೇಂದ್ರ ಭಾಗವಹಿಸಿದ್ದರು.

ಬಂದ್ ಪೂರ್ವಭಾವಿ ಸಭೆ

ಮುಳಬಾಗಲು: ಶಾಶ್ವತ ನೀರಾವರಿಗಾಗಿ ಫೆ. 14ರಂದು ನಡೆಯಲಿರುವ ಬಂದ್ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷಗಳು ಬೆಂಬಲ ನೀಡುತ್ತಿದ್ದಾರೆಂದು ಮಾಜಿ ಸಚಿವ ಅಲಂಗೂರು ಶ್ರೀನಿವಾಸ್ ನುಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳು ಮತ್ತು ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದರು. 
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ನೀಡಲು ಇದುವರೆಗೆ ಅಧಿಕಾರ ನಡೆಸಿದ ಯಾವುದೇ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ. ಈಗಲಾದರೂ ಸರ್ಕಾರ ಈ ಜಿಲ್ಲೆಗಳಿಗೆ ನೀರಿನ ಸೌಲಭ್ಯ ನೀಡಲು ಹಣ ಮೀಸಲಿಡಬೇಕೆಂದು ಹೇಳಿದರು.

ಎರಡನೇ ಹಂತದ ಹೋರಾಟದ ಬಗ್ಗೆ ಫೆ. 17ರಂದು ಕೋಲಾರದಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಅಬ್ದುಲ್‌ಬಷೀರ್, ಸದಸ್ಯ ಎಂ.ಪಿ.ವಾಜೀದ್, ಚಂದ್ರಪ್ಪ, ಅಕ್ರಂ, ಮಾಜಿ ಉಪಾಧ್ಯಕ್ಷ ನಾಗರಾಜ್, ಜೆಡಿಎಸ್ ಮುಖಂಡ ಮುನಿಆಂಜಪ್ಪ. ಬಿಜೆಪಿ ಮುಖಂಡ ಹರೀಶ್, ಅಂಬರೀಶ್, ಕೇಸರಿಶಂಕರ್. ತಾ.ಪಂ. ಸದಸ್ಯರಾದ ಶಿವರಾಮರೆಡ್ಡಿ, ತಿಮ್ಮರಾಜು, ತಾ.ಪಂ. ಮಾಜಿ ಉಪಾಧ್ಯಕ್ಷ ರಘುಪತಿರೆಡ್ಡಿ, ವಕೀಲ ತಿಮ್ಮರಾಯಪ್ಪ, ಜಿ.ಪಂ. ಮಾಜಿ ಸದಸ್ಯ ರಾಜಗೋಪಾಲ್, ತಾಲ್ಲೂಕು ಕನ್ನಡ ಪರಿಷತ್ ಅಧ್ಯಕ್ಷ ಕನ್ನಡಭಟ ವೆಂಕಟಪ್ಪ, ಪ್ರಗತಿಪರ ರೈತ ಮುನಿವೆಂಕಟರಾಮಯ್ಯ ಮುಂತಾದವರು ಭಾಗವಹಿಸಿದ್ದರು. ಅಟೊ ಚಾಲಕರ ಸಂಘ, ಕಿಸಾನ್ ಸಂಘ, ಸಿಪಿಐ ಮತ್ತು ಇತರ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.