ADVERTISEMENT

ಅಸ್ಮಿತೆಯ ನಡುವೆ ಮುಂದುವರಿದ ಅಭದ್ರತೆ

​ಪ್ರಜಾವಾಣಿ ವಾರ್ತೆ
Published 26 ಮೇ 2014, 9:41 IST
Last Updated 26 ಮೇ 2014, 9:41 IST
ಕೋಲಾರದಲ್ಲಿ ಈಚೆಗೆ ನಡೆದ ಕಾನೂನು ಅರಿವು–ನೆರವು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ತೃತೀಯ ಲಿಂಗಿಗಳು.
ಕೋಲಾರದಲ್ಲಿ ಈಚೆಗೆ ನಡೆದ ಕಾನೂನು ಅರಿವು–ನೆರವು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ತೃತೀಯ ಲಿಂಗಿಗಳು.   

ಕೋಲಾರ: ಮನೆ ಮಂದಿ, ಶಾಲೆ, ಗೆಳೆಯರು, ಎಲ್ಲ­ರಿಂದಲೂ ನಾವು ನೊಂದಿದ್ದೇವೆ. ದಯವಿಟ್ಟು ಇನ್ನೂ ನಮ್ಮನ್ನು ನೋಯಿಸಬೇಡಿ. ನಮ್ಮ ಅರ್ಹತೆಗೆ ತಕ್ಕ ಕೆಲಸ ಕೊಡಿ. ನಮ್ಮನ್ನೂ ಬದುಕಲು ಬಿಡಿ. ನಮ್ಮ ಭಾವನೆ­ಗಳನ್ನು ಅರ್ಥ ಮಾಡಿಕೊಳ್ಳಿ. ಅಷ್ಟೇ ನಾವು ನಿಮ್ಮನ್ನು ಕೇಳುವುದು.....

–ನಗರದ ಕುವೆಂಪು ನಗರದ ಸಮ್ಮಿಲನ ಸಂಸ್ಥೆಯ ಕೊಠಡಿಯಲ್ಲಿ ಕುಳಿತು ಸಂಸ್ಥೆಯ ಅಧ್ಯಕ್ಷೆ ಅಶ್ವಿನಿ ರಾಜನ್‌ ಹೇಳಿ ಮೌನವಾದರು.
ಮನೆಯವರು ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಮನೆ ಹುಡುಕಲು ಹೋದರೆ ಬಾಡಿಗೆ ಬೆಲೆ ದಿಢೀರನೆ ಹೆಚ್ಚಾಗುತ್ತದೆ. ವಸತಿ ಸೌಲಭ್ಯ ಮರೀ­ಚಿಕೆ­ಯಾಗಿದೆ. ಇರುವ ಊರು ಬಿಟ್ಟು ಹೊರಗೆ ಹೋದರೆ ಗೂಂಡಾಗಳ, ಕೆಲವು ಪೊಲೀಸರ ಕಾಟ ಶುರು­ವಾಗುತ್ತದೆ. ನಾವು  ಬದುಕಲು ಹೀಗೆ ಎಲ್ಲಿವರೆಗೂ ಅಲೆಯುತ್ತಲೇ ಇರ­ಬೇಕು? ಎಂಬ  ಪ್ರಶ್ನೆ ಮತ್ತೆ ಮೌನ ಹುಟ್ಟುಹಾಕಿತು.

ಕೋಲಾರದವರೇ ಆದ ಇವರು ಜಿಲ್ಲೆಯಲ್ಲಿ ತೃತೀಯ ಲಿಂಗಿಗಳ ಸಂಘಟನೆಯಲ್ಲಿ ತೊಡಗಿ­ಕೊಂಡಿ­ರುವ ಅವರು, ತಮ್ಮ ಸಮುದಾಯ ಎದುರಿಸುತ್ತಿ­ರುವ ಸಮಸ್ಯೆಗಳ ಕುರಿತು ತಮ್ಮ ಮನದಾಳದ ಮಾತು­ಗಳನ್ನು ಭಾನುವಾರ ‘ಪ್ರಜಾವಾಣಿ’ ಮುಂದೆ ತೆರೆದಿಟ್ಟರು.

ಲೈಂಗಿಕ ಅಲ್ಪ­ಸಂಖ್ಯಾ­ತರಿಗೆ ‘ತೃತೀಯ ಲಿಂಗ­’ ದವರು ಎಂದು ಕಾನೂನಿನ ಮಾನ್ಯತೆ ನೀಡುವ ಮೂಲಕ ಸುಪ್ರೀಂ­ಕೋರ್ಟ್‌ ತೀರ್ಪು ನೀಡಿದೆ. ‘ತೃತೀಯ ಲಿಂಗ’ದವರು ಸಾಮಾ­ಜಿಕ ಮತ್ತು ಶೈಕ್ಷಣಿ­ಕ­ವಾಗಿ ಹಿಂದುಳಿ­ದವರು ಎಂದು ಪರಿಗಣಿಸಿ ಶಿಕ್ಷಣ, ನೌಕರಿಯಲ್ಲಿ ಮೀಸ­ಲಾತಿ ನೀಡು­ವಂತೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಆದರೆ ಬಹಳಷ್ಟು ಅಧಿಕಾರಿಗಳಿಗೆ ಅದು ಇನ್ನೂ ಗೊತ್ತೇ ಆಗಿಲ್ಲ ಎಂಬುದು ಅವರ ವಿಷಾದ.

ನಮ್ಮ ಸಮುದಾಯವು ಎದುರಿಸು­ತ್ತಿ­ರುವ ಆತಂಕ­ಗಳನ್ನು ಮೀರುವುದು ಹೇಗೆ ? ನಾವೆಲ್ಲ  ಸಮಾಜದ ಮುಖ್ಯ­ವಾಹಿನಿಗೆ ಬರುವುದು ಹೇಗೆ ಎಂಬುದೇ  ಸವಾಲಾಗಿದೆ. ಆ ದಿಕ್ಕಿನಲ್ಲಿ ಆಂದೋಲನ ಶುರುವಾಗಿದೆ. ಮುಂದಿನ ದಿನಗಳ ಮೇಲೆ ಭರವಸೆ ಇಟ್ಟು ನಡೆಯುತ್ತಿದ್ದೇವೆ ಎಂದಾಗ ಅವರ ಕಣ್ಣುಗಳಲ್ಲಿ ಹೊಸ ಕನಸುಗಳೆಡೆಗಿನ ನಿರೀಕ್ಷೆ ಹೊಳೆದಿತ್ತು.

ಇಲ್ಲಿ ಏಕೆ ಇಲ್ಲ ?
ತಮಿಳುನಾಡಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ತಿರುನಂಗೈಯರ್‌ (ಮಂಗಳಮುಖಿಯರು) ಎಂದ ಕರೆದು ಸರ್ಕಾರ ಎಲ್ಲ ಸೌಲಭ್ಯಗಳನ್ನೂ ಕೊಡುತ್ತದೆ. ಆದರೆ  ರಾಜ್ಯದಲ್ಲಿ ಮಾತ್ರ ಇಂಥ ಒಂದೇ ಒಂದು ಸೌಲಭ್ಯವೂ ಇಲ್ಲ ಏಕೆ ? ಎಂಬುದು ಅವರ ಪ್ರಶ್ನೆ.

ನನ್ನ ಭಾವನೆ, ಒಲಿಂಗದ ಬದಲಾವಣೆ­ಯನ್ನು ನನ್ನ ಮನೆಯವರಿಗೆ ಅರ್ಥಮಾಡಿಸಲು 10 ವರ್ಷ ಬೇಕಾಯಿತು. ಇನ್ನು ಸಮಾಜಕ್ಕೆ ಅರ್ಥ ಮಾಡಿಸಲು ಇನ್ನೆಷ್ಟು ವರ್ಷ ಬೇಕಾಗಬಹುದು. ದಯಮಾಡಿ, ಪೋಷಕರೇ ನಮ್ಮ ಬಗ್ಗೆ ಮಕ್ಕಳಿಗೆ ಕೆಟ್ಟ, ತಪ್ಪು ಪದ ಬಳಸಿ ಪರಿಚಯಿಸಬೇಡಿ. ಅತ್ಯಂತ ಸೂಕ್ಷ್ಮ ಮನಸ್ಸಿನವರಾದ ನಾವು ಸಣ್ಣ ನೋವನ್ನೂ ತಡೆದು-­ಕೊಳ್ಳಲು ಸಾಧ್ಯವಿಲ್ಲದವರು. ಹೀಗಾಗಿ ಬಾಳಲು ಬಿಡಿ ಎಂಬುದೇ ಎಲ್ಲರಲ್ಲೂ ನಮ್ಮ ಕೋರಿಕೆ ಎಂದು ಅವರು ಮೌನಕ್ಕೆ ಸಂದರು.

ಏನಿದು ಸಮ್ಮಿಲನ ?
ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಗಾಗಿ ಸ್ಥಾಪನೆಯಾಗಿರುವ ಸಂಸ್ಥೆ ಸಮ್ಮಿಲನ.  ಕೋಲಾರದ ಕುವೆಂಪು ನಗರದ ಮಿನಿ ಉದ್ಯಾನದ ಸಮೀಪ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು, ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂಡಿಯಾ ಅಲಯನ್ಸ್ ಸಂಸ್ಥೆಯು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಪೆಹಚಾನ್’ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದೆ ಎನ್ನುತ್ತಾರೆ ಸಂಸ್ಥೆಯ ಯೋಜನಾ ನಿರ್ದೇಶಕಿ ನಾಗವೇಣಿ.

ಆಪ್ತಸಮಾಲೋಚಕರು, ಕಾರ್ಯಕ್ರಮಗಳ ಮೌಲ್ಯಮಾಪಕರು, ಲೆಕ್ಕಿಗರು, ಸ್ವಯಂಸೇವಕರು ಸೇರಿದಂತೆ 8 ಮಂದಿಯ ಸಂಸ್ಥೆಯು ಜಿಲ್ಲೆಯಾದ್ಯಂತ ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸಲೆಂದು ಮೂವರು ಕ್ಷೇತ್ರ ಪರಿವೀಕ್ಷಕರನ್ನು ಹೊಂದಿದೆ.

ಸಮ್ಮಿಲನ ಸಂಸ್ಥೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶ್ರಾಂತಿ, ಎಚ್‌ಐವಿ–ಏಡ್ಸ್ ನಿಯಂತ್ರಣದ ಕುರಿತು ಮಾಹಿತಿ, ಮಾರ್ಗದರ್ಶನ, ಆಪ್ತಸಮಾಲೋಚನೆ, ಬಿಕ್ಕಟ್ಟುಗಳ ಸಂದರ್ಭದಲ್ಲಿ ನೆರವು ನೀಡಲಾಗುತ್ತದೆ.

714 ಸದಸ್ಯರು:  ಸಮ್ಮಿಲನ ಸಂಸ್ಥೆಯಲ್ಲಿ ಎರಡು ವರ್ಷದ ಅವಧಿಯಲ್ಲಿ ಇದುವರೆಗೆ 714 ಲಿಂಗತ್ವ ಅಲ್ಪಸಂಖ್ಯಾತರು ಹೆಸರು ನೋಂದಾಯಿಸಿದ್ದಾರೆ. ಮಾರ್ಚಿ ಕೊನೆಯ ಹೊತ್ತಿಗೆ ಈ ಸಂಸ್ಥೆಯಲ್ಲಿ 556 ಮಂದಿ ಹೆಸರು ನೋಂದಾಯಿಸಿದ್ದರು. ಶ್ರೀನಿವಾಸ­ಪುರ–46, ಮುಳಬಾಗಲು 80, ಕೋಲಾರ –148, ಮಾಲೂರು–2, ಬಂಗಾರಪೇಟೆ –154, ಕೆಜಿಎಫ್‌ –128.

ಸರ್ಕಾರದ ಸಹಾಯಧನ...
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬನೆಗಾಗಿ ತಲಾ       ₨ 20 ಸಾವಿರ ಸಹಾಯಧನದ ನೆರವನ್ನು ಜಿಲ್ಲೆಯ 34 ಮಂದಿಗೆ ಸಂಸ್ಥೆಯ ಮೂಲಕ ವಿತರಿಸಲಾಗಿರುವುದು ವಿಶೇಷ. ಸಹಾಯಧನ ಪಡೆದವರು ಟೀ ಅಂಗಡಿ, ಮಿನಿ ಹೋಟೆಲ್‌, ಹೂ ಮಾರಾಟ, ಚಿಲ್ಲರೆ ಅಂಗಡಿ, ಬಟ್ಟೆ ವ್ಯಾಪಾರ, ಹಸು, ಕೋಳಿ, ಮೇಕೆ ಸಾಕಾಣಿಕೆ, ನಾಯಿ ಮರಿಗಳ ಸಾಕಾಣಿಕೆ, ತರಕಾರಿ ವ್ಯಾಪಾರ, ಬೀಡಾ ಅಂಗಡಿ, ಹಣ್ಣಿನಂಗಡಿ, ತೆರೆದು ಬದುಕು ಕಂಡುಕೊಂಡಿದ್ದಾರೆ. ಅವರಲ್ಲದೆ, ಸಹಾಯಧನಕ್ಕಾಗಿ ಇನ್ನೂ 63 ಮಂದಿಯ ಅರ್ಜಿಯನ್ನು ಕೂಡ ಇಲಾಖೆಗೆ ಸಲ್ಲಿಸಲಾಗಿದೆ ಎಂದು ನಾಗವೇಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.