ADVERTISEMENT

ಕಾಮಗಾರಿ ಸ್ಥಗಿತ: ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 9:15 IST
Last Updated 19 ಅಕ್ಟೋಬರ್ 2011, 9:15 IST
ಕಾಮಗಾರಿ ಸ್ಥಗಿತ: ಸಂಚಾರಕ್ಕೆ ಸಂಚಕಾರ
ಕಾಮಗಾರಿ ಸ್ಥಗಿತ: ಸಂಚಾರಕ್ಕೆ ಸಂಚಕಾರ   

ಕೆಜಿಎಫ್: ರಾಬರ್ಟ್‌ಸನ್‌ಪೇಟೆ-ಊರಿ ಗಾಂ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆ ಸೃಷ್ಟಿಸಿದೆ.

ಸಂಚಾರ ದಟ್ಟಣೆಯ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಪರಿವರ್ತಿಸಲು ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿತು. ಒತ್ತುವರಿ ಕಟ್ಟಡ ತೆರವುಗೊಳಿಸಲಾಯಿತು. 67 ಲಕ್ಷ ರೂಪಾಯಿ ವೆಚ್ಚದಲ್ಲಿ 65 ಅಡಿ ರಸ್ತೆಗೆ ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆಯಿತು. ಕಾಮಗಾರಿ ಯಲ್ಲಿ ದೂರದೃಷ್ಟಿ ಯೋಜನೆ ರೂಪಿಸದಿದ್ದರಿಂದ ಯೋಜನೆ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದೆ ಎಂಬುದು ಸ್ಥಳೀಯರ ಆರೋಪ.

ಹಳೆ ರಸ್ತೆ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ಕಂಬ ಬದಲಾಯಿಸಿ, ಹೊಸ ಕಂಬ ನೆಟ್ಟು ವಿದ್ಯುತ್ ಸಂಪರ್ಕ ನೀಡಲು ಕಾಮಗಾರಿ ಯೋಜನೆಯಲ್ಲಿ ಪ್ರಸ್ತಾಪವೇ ಇರಲಿಲ್ಲ. ಕಾಮಗಾರಿ ಆರಂಭವಾದ ನಂತರ ಬೆಸ್ಕಾಂಗೆ ವಿದ್ಯುತ್ ಕಂಬ ಬದಲಾವಣೆಗೆ ಕೋರಿಕೆ ಸಲ್ಲಿಸಲಾಯಿತು.

ಆದರೆ ಬೆಸ್ಕಾಂ ತಿಳಿಸಿದ ಮೊತ್ತ ನೀಡಲು ಲೋಕೋಪಯೋಗಿ ಇಲಾಖೆ ಹಿಂದೇಟು ಹಾಕಿತು. ನಂತರ ಇಲಾಖೆ ಯಲ್ಲಿದ್ದ ಸರ್ವಿಸ್ ಎಂಜಿನಿಯರ್‌ಗಳ ಸಹಾಯದಿಂದಲೇ ಕಡಿಮೆ ವೆಚ್ಚದಲ್ಲಿ ತಾನೇ ಕಂಬ ನೆಡಲು ತೀರ್ಮಾನ ತೆಗೆದು ಕೊಂಡಿತು. ಇದರಂತೆ ಪ್ರಸ್ತಾವನೆಯನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆಗೆ ಕಳಿಸಲಾಗಿದ್ದು, ಇನ್ನೂ ಯಾವುದೇ ನಿರ್ಧಾರವನ್ನು ಹಿರಿಯ ಅಧಿಕಾರಿಗಳು ತೆಗೆದುಕೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸಹ ಕಂಬ ಬದಲಾವಣೆ ವರೆಗೂ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

ಕಾಮಗಾರಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಕಲ್ಲುಗಳಿಂದ ಕೂಡಿದೆ. ವಾಹನ ಸಂಚರಿಸಿದರೆ ಅವುಗಳ ಮಧ್ಯದಿಂದ ಏಳುವ ದೂಳು ಅಸಹನೀಯ ವಾತಾವರಣ ಸೃಷ್ಟಿಸಿದೆ.

ಖಾಸಗಿ ಹೆರಿಗೆ ಆಸ್ಪತ್ರೆ, ಎಲ್‌ಐಸಿ, ಅಂಚೆ ಕಚೇರಿ, ಜೈನ್ ದೇವಾಲಯ ಸೇರಿದಂತೆ ಅನೇಕ ಖಾಸಗಿ ಅಂಗಡಿಗಳು ದೂಳಿನಿಂದ ಆವೃತ ವಾಗಿದೆ.

ಅಲ್ಲಲ್ಲಿ ಇರುವ ಹಳ್ಳಗಳಲ್ಲಿ ನೀರು ತುಂಬಿಕೊಂಡು ವಾಹನಗಳು ಅಪಾಯಕಾರಿಯಾಗಿ ಸಂಚರಿಸುತ್ತಿವೆ. ದ್ವಿಚಕ್ರ ವಾಹನಗಳ ಚಾಲಕರು ವಾಹನಗಳಿಂದ ಆಯತಪ್ಪಿ ಬೀಳುವುದು ನಿಂತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

`ದೂಳಿನಿಂದ ಎಲೆಕ್ಟ್ರಾನಿಕ್ ವಸ್ತುಗಳು ರಿಪೇರಿಗೆ ಒಳಪಡುತ್ತಿವೆ. ಕಟ್ಟಡ ತೆರವು ಮಾಡಿಸುವಾಗ ನಿರಂತರವಾಗಿ ಬರುತ್ತಿದ್ದ ಅಧಿಕಾರಿಗಳು ಈಗ ಈ ಕಡೆ ತಲೆಹಾಕುತ್ತಿಲ್ಲ~ ಎಂದು ವರ್ತಕ ರೊಬ್ಬರು ಬೇಸರ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.