ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದಂತೆ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೊಸ ಪದ್ಧತಿಯನ್ನು ಅನುಸರಿಸಲು ರೈತರು ಮುಂದಾಗಿದ್ದಾರೆ. ಧರೆಗೆ ಬಿದ್ದ ಪ್ರತಿ ಹನಿ ಮಳೆ ನೀರನ್ನೂ ಸಮಪರ್ಕವಾಗಿ ಬಳಸಿಕೊಳ್ಳುವ ವಿಧಾನಗಳನ್ನು ತಾವೇ ಕಂಡುಕೊಳ್ಳುತ್ತಿದ್ದಾರೆ.
ತಾಲ್ಲೂಕು ಮಾವಿನ ಬೆಳೆಗೆ ಪ್ರಸಿದ್ಧಿ. ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗಿದೆ. ಈಗಲೂ ಮಾವಿನ ಬೆಳೆಯ ವಿಸ್ತರಣೆ ಮುಂದುವರೆದಿದೆ. ಶತಮಾನಗಳಿಂದ ಇಲ್ಲಿ ಮಾವನ್ನು ಗುಳಿ ಪದ್ಧತಿಯಲ್ಲಿ ನಾಟಿ ಮಾಡಲಾಗುತ್ತಿತ್ತು. ಸುಮಾರು ಎರಡು ಅಡಿ ಆಳದ ಗುಳಿ ತೋಡಿ ಗಿಡ ನೆಡಲಾಗುತ್ತಿತ್ತು. ಸಾಕಷ್ಟು ಮಳೆ ಸುರಿಯುತ್ತಿದ್ದ ಕಾಳದಲ್ಲಿ ಅದು ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಅಂಥ ಮಳೆ ಇತಿಹಾಸವಾಗಿದೆ. ನಾಟಿ ಮಾಡುವ ಗಿಡಗಳಲ್ಲಿ ಬದುಕಿ ಉಳಿಯುವ ಗಿಡಗಳ ಸಂಖ್ಯೆ ಕಡಿಮೆಯಾಗಿದೆ.
ಈ ಸಮಸ್ಯೆ ನಿವಾರಣೆಗೆ ರಾಂಪುರ ಗ್ರಾಮದ ಪ್ರಗತಿಪರ ರೈತ ಹಾಗೂ ಪರಿಸರವಾದಿ ಅಶೋಕ್ ಕುಮಾರ್ ಕಾಲುವೆ ಪದ್ಧತಿಯಲ್ಲಿ ಮಾವಿನ ಗಿಡ ನಾಟಿ ಮಾಡಿದ್ದಾರೆ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಕಾಲುವೆಗಳನ್ನು ನಿರ್ಮಿಸಿ ಕಾಲುವೆಗೆ ಸೊಪ್ಪು ಸದೆ ತುಂಬಿ ಮಣ್ಣು ಮುಚ್ಚಿದ ನಂತರ ಮಾವಿನ ಸಸಿಗಳನ್ನು ನೆಟ್ಟಿದ್ದಾರೆ. ಕಾಲುವೆ ಪಕ್ಕದಲ್ಲಿ ಎರಡೂ ಕಡೆ ತೊಗರಿ ಗಿಡ ಬೆಳೆಸಿದ್ದಾರೆ. ಈ ವಿಧಾನದಲ್ಲಿ ಬೆಳೆ ನಳನಳಿಸುತ್ತಿದೆ.
ಗುಳಿ ಪದ್ಧತಿಯಲ್ಲಿ ಮಳೆ ನೀರು ಹರಿದು ವ್ಯಥರ್ವಾಗುತ್ತದೆ. ಕಾಲುವೆ ಪದ್ಧತಿಯಲ್ಲಿ ಸುರಿದ ಮಳೆ ನೀರು ಜಮೀನಿನಿಂದ ಹೊರಗೆ ಹರಿದು ಹೋಗದೆ ಕಾಲುವೆಯಲ್ಲಿ ನಿಲ್ಲುತ್ತದೆ. ಇದರಿಂದ ಹೆಚ್ಚು ಕಾಲ ತೇವ ಉಳಿಯಲು ಸಾಧ್ಯವಾಗುತ್ತದೆ. ಕಾಲುವೆ ಪಕ್ಕದಲ್ಲಿ ನಾಟಿ ಮಾಡಲಾದ ತೊಗರಿಗೂ ತೇವಾಂಶ ಸಿಕ್ಕಿ ಬೆಳೆ ಹುಲುಸಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಂಪುರ ಅಶೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈಗಾಗಲೇ ಅವರು ಗಿಡದ ಬೇರಿಗೆ ಬಾಟಲ್ ನೀರು ಉಣಿಸುವ ಮೂಲಕ ಬೇಸಿಗೆಯಲ್ಲೂ ಗಿಡ ಸೊರಗದಂತೆ ಮಾಡಿದ್ದಾರೆ. ಕಳೆಗಳನ್ನು ಬೆಳೆಯಲು ಬಿಟ್ಟು ಅದಕ್ಕೆ ಕಟ್ಟರ್ ಹಾಕಿಸಿ ಮಣ್ಣಿಗೆ ಸೇರಿಸುವುದರ ಮೂಲಕ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಜೊತೆಗೆ ಎರೆ ಗೊಬ್ಬರ ತಯಾರಿಸಿ ಜಮೀನಿನ ಫಲವತ್ತತೆ ಹೆಚ್ಚಿಸುತ್ತಿದ್ದಾರೆ. ಅಂತರ್ಜಲದ ಕೊರತೆ ಹಾಗೂ ಮಳೆ ಅಭಾವದಿಂದಾಗಿ ಕಂಗೆಟ್ಟಿರುವ ರೈತರು, ಲಭ್ಯವಿರುವ ನೀರನ್ನು ಹೆಚ್ಚು ಜೋಪಾನವಾಗಿ ಬಳಸದಿದ್ದರೆ, ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಸಿಗುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ.
ಅಶೋಕ್ ಕುಮಾರ್ ಒಬ್ಬ ಪ್ರಯೋಗಶೀಲ ಕೃಷಿಕ. ಅವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳು ಇತರ ರೈತರಿಗೆ ಮಾದರಿಯಾಗಿ ಅನುಸರಿಸಲ್ಪಡುತ್ತಿವೆ. ಇದನ್ನು ರೈತ ಸಮುದಾಯ ಸಾಂಘಿಕವಾಗಿ ರೂಢಿಸಿಕೊಂಡಲ್ಲಿ ನೀರಿನ ಸದ್ಬಳಕೆ ಸಾಧ್ಯವಾಗುತ್ತದೆ. ಬೆಳೆಯೂ ಕೈಗೆ ಸಿಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.