ಮುಳಬಾಗಿಲು: ತಾಲ್ಲೂಕಿನ ಕೀಲುಹೊಳಲಿ ಗ್ರಾಮದ ಹೊರವಲಯದಲ್ಲಿರುವ ವೆಂಕಟಮ್ಮನ ಕೆರೆಯು ಕೋಡಿ ಹರಿದಿದ್ದು, ರೈತರು ಹಾಗೂ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಎರಡು ವಾರದಿಂದ ಗ್ರಾಮದ ಸುತ್ತಮುತ್ತ ಭಾರಿ ಮಳೆಯಾಗಿದ್ದರಿಂದ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಹೊಸಕೆರೆ, ಹೊಳೆಕುಂಟೆ ಕೆರೆ, ಹುದ್ದನಗುಂಟೆ ಕೆರೆ, ಗುಂಟ್ಟಿಗಾನ ಕೆರೆ ಮತ್ತು ಪುತ್ತೇರಿ ಕೆರೆ ಸಹ ಕೋಡಿ ಹರಿದಿವೆ.
ಕೆರೆಗಳನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೋಡಿ ಭಾಗದ ನೀರಿನಲ್ಲಿ ಆಟವಾಡಿ ಸಂತಸ ಪಡುತ್ತಿದ್ದಾರೆ. ಮತ್ತೆ ಕೆಲವರು ಮೊಬೈಲ್ನಲ್ಲಿ ಫೋಟೊ ತೆಗೆಸಿಕೊಂಡು ಸಂಭ್ರಮಿಸುವುದು ಸಾಮಾನ್ಯವಾಗಿದೆ. ಮೀನುಗಾರಿಕೆಯು ಚುರುಕುಗೊಂಡಿದೆ. ಗ್ರಾಮಸ್ಥರು ಗಾಳ ಹಾಗೂ ಬಲೆ ಹಾಕಿ ಪ್ರತಿನಿತ್ಯ ಮೀನು ಹಿಡಿಯುತ್ತಿದ್ದಾರೆ.
ಗ್ರಾಮದ ಕೆರೆ ಕುಂಟೆಗಳು ಬೆಟ್ಟದ ತಗ್ಗಿನಲ್ಲಿ ಇರುವುದರಿಂದ ಬೆಟ್ಟದ ಮೇಲಿಂದ ಮಳೆ ನೀರು ಕೆಳಗೆ ಹರಿದು ಬರುತ್ತಿದೆ. ತಾಲ್ಲೂಕಿನಲ್ಲಿ ಕಳೆದೊಂದು ದಶಕದಿಂದ ಬರ ಪರಿಸ್ಥಿತಿ ಇದ್ದ ಕಾರಣ ಕೆರೆ, ಬಾವಿ, ಹಳ್ಳ, ಕುಂಟೆಗಳಲ್ಲಿ ಜೀವಜಲ ಬತ್ತಿತ್ತು. ಇತ್ತೀಚೆಗೆ ಉತ್ತಮ ಮಳೆಯಾಗಿರುವುದರಿಂದ ಬಾವಿ, ಕುಂಟೆ, ಜೌಗು ಪ್ರದೇಶದಲ್ಲಿ ನೀರು ಜಿನುಗಲಾರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.