ಕೋಲಾರ: ಆಹಾರ ಪೂರೈಕೆ ಮತ್ತು ಕಲಿಕಾ ಕೇಂದ್ರಗಳಾಗಿರುವ ಅಂಗನವಾಡಿಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ನೂರಾರು ಕಾರ್ಯಕರ್ತೆಯರು ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡ ಕಾರ್ಯಕರ್ತೆಯರು, ಅಂಗನವಾಡಿ ಕೇಂದ್ರಗಳನ್ನು ಕೇವಲ ಸಲಹೆ ಮತ್ತು ಕಲಿಕಾ ಕೇಂದ್ರಗಳಾಗಿ ಬದಲಿಸುವ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡುವ ನೆಪದಲ್ಲಿ ಖಾಸಗಿ ಕಾನ್ವೆಂಟ್ಗಳಿಗೆ ಯೋಜನೆಯ ಹಣವನ್ನು ವರ್ಗಾಯಿಸುವ ಹುನ್ನಾರ ನಿಲ್ಲಬೇಕು ಎಂದು ಹೇಳಿದರು.
ಸಮುದಾಯದ ಜನರನ್ನು ಪಾಲ್ಗೊಳ್ಳುವಂತೆ ಮಾಡುವ ನೆಪದಲ್ಲಿ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಬೇಕು ಎಂಬ ಶಿಫಾರಸನ್ನು ಜಾರಿಗೊಳಿಸಿದರೆ ಲಕ್ಷಾಂತರ ಅಂಗನವಾಡಿ ಮಹಿಳೆಯರ ಬದುಕು ಅತಂತ್ರಗೊಳ್ಳುತ್ತದೆ. ಅಲ್ಲದೆ, ಮಕ್ಕಳ ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮಕ್ಕೂ ಸಂಚಕಾರ ಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಅಂಗನವಾಡಿ ನೌಕರರ ಜಿಲ್ಲಾ ಮುಖಂಡರಾದ ಎಂ.ಮುನಿರಾಜಮ್ಮ, ವಿ.ಮಂಜುಳಾ, ಅನಸೂಯಮ್ಮ, ಜಯಲಕ್ಷ್ಮಿ, ವಿಶಾಲಾಕ್ಷಿ, ಶಾಂತಮ್ಮ, ರಾಜಮ್ಮ, ಕಲ್ಪನಾ, ಗೌರಮ್ಮ, ಲಕ್ಷ್ಮಿಬಾಯಿ, ಉಮಾ, ಮೀನಾಕುಮಾರಿ, ಲಕ್ಷ್ಮಿದೇವಿ, ರಾಜಮ್ಮ, ವೆಂಕಟಲಕ್ಷ್ಮಿ, ಸರೋಜಮ್ಮ, ಶಾಹಿನ್ ತಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.