ADVERTISEMENT

ಜಾತಿ ಪ್ರಮಾಣ ಪತ್ರ ರದ್ದು

ಇಕ್ಕಟ್ಟಿನಲ್ಲಿ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:17 IST
Last Updated 21 ಮಾರ್ಚ್ 2014, 6:17 IST

ಕೋಲಾರ: ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಜೆಡಿಎಸ್‌ ಘೋಷಿಸಿದ್ದ ಕೆ.ಕೇಶವ ಅವರಿಗೆ ನೀಡಲಾಗಿದ್ದ ಪರಿ­ಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಮಾ.19ರಂದು ರದ್ದು ಮಾಡಿದ್ದಾರೆ.

ಜೆಡಿಎಸ್‌ ತಾಲ್ಲೂಕು ಘಟಕದ ಉಪಾಧ್ಯಕ್ಷ ಡಿ.ಮುನೇಶ್‌ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ಮತ್ತು ದಾಖಲೆ­ಗಳನ್ನು ಸುದ್ದಿಗಾರರಿಗೆ ನೀಡಿದರು. ಸ್ಥಳೀಯ ಆಕಾಂಕ್ಷಿಗಳನ್ನು ನಿರ್ಲಕ್ಷ್ಯಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಆಕ್ಷೇಪಕ್ಕೆ ಗುರಿಯಾಗಿದ್ದ ಪಕ್ಷ ಈಗ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.

ವಿವರ: ಬೆಂಗಳೂರಿನ ಮತ್ತಿಕೆರೆ ನಿವಾಸಿ ಕೇಶವ ಅವರಿಗೆ ಮಾ. 6ರಂದು ಜಾತಿ ಪ್ರಮಾಣಪತ್ರ ನೀಡಲಾಗಿತ್ತು. 1994ರಲ್ಲಿ ಕೋಲಾರ ತಹಶೀಲ್ದಾರ­ರಿಂದ ಕೇಶವ ಪಡೆದಿದ್ದ ಪ್ರಮಾಣಪತ್ರ ಆಧರಿಸಿ ಅದನ್ನು ನೀಡಲಾಗಿತ್ತು. ಆದರೆ ಅವರು ಭೋವಿ ಜಾತಿಗೆ ಸೇರುವುದಿಲ್ಲ ಎಂದು ಆಕ್ಷೇಪಿಸಿ ಪ್ರಜಾ ವಿಮೋಚನಾ ಚಳವಳಿಯ ರಾಜ್ಯ ಸಮಿತಿಯು ಮನವಿ ಸಲ್ಲಿಸಿತ್ತು.

ಕೇಶವ ಆಂಧ್ರಪ್ರದೇಶದ ಮದನ­ಪಲ್ಲಿ ತಾಲ್ಲೂಕಿನ ಮಾಲಪಾಟು ಗ್ರಾಮದ ನಿವಾಸಿ. ಹಿಂದುಳಿದ ವರ್ಗಗಳಿಗೆ ಸೇರಿದ ವಡ್ಡೆ ಜಾತಿಗೆ ಸೇರುತ್ತಾರೆ. 10 ವರ್ಷ ಶಿಕ್ಷಣವನ್ನು ಹಿಂದುಳಿದ ವರ್ಗಗಳ ಕೋಟಾದಡಿ ಅಲ್ಲಿಯೇ ಪಡೆದಿದ್ದಾರೆ. ವಡ್ಡೆ ಜಾತಿ ಆಂಧ್ರದಲ್ಲಿ ಹಿಂದುಳಿದ ಜಾತಿಯೇ ಹೊರತು ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಅನ್ವಯಿಸುವುದಿಲ್ಲ. ಹೀಗಾಗಿ ಕೇಶವ ಅವರಿಗೆ ಭೋವಿ ಪ್ರಮಾಣಪತ್ರ ನೀಡಿದರೆ ಅಸಿಂಧುವಾಗುತ್ತದೆ ಎಂದು ಆರೋಪಿಸಿತ್ತು.

ಆ ಹಿನ್ನೆಲೆಯಲ್ಲಿ ತಹಶೀಲ್ದಾರರು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಂದ ಸ್ಪಷ್ಟನೆ­ಯನ್ನು ಕೋರಿ ಪತ್ರ ಬರೆದಿದ್ದರು.

ವಡ್ಡೆ ಜಾತಿ  ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯ 23ನೇ ಕ್ರಮಸಂಖ್ಯೆ­ಯಲ್ಲಿ ನಮೂದಾಗದೇ ಇರುವುದ­ರಿಂದ, ಪರಿಶಿಷ್ಟ ಜಾತಿ ಎಂದು ಪರಿಗಣಿ­ಸ­ಲಾಗುವುದಿಲ್ಲ ಎಂದು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದರು. ಕೇಂದ್ರದ ಸಮಾಜ ಕಲ್ಯಾಣ ಸಚಿವಾ­ಲಯ ಪ್ರಕಟಿಸಿರುವ ಗೆಜೆಟಿಯರ್‌ನಲ್ಲಿ ನಮೂದಿಸಿರುವ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ­ದಲ್ಲಿ ವಡ್ಡಿ, ವಡ್ಡೆ, ಒಡ್ಡಿಲು, ವಡ್ಡೆಲು ಜಾತಿಗಳು ನಮೂದಾಗಿವೆ. ಹೀಗಾಗಿ ಕೇಶವ ಅವರಿಗೆ ನೀಡಲಾಗಿರುವ ಭೋವಿ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸ­ಲಾಗಿದೆ ಎಂದು ಆದೇಶಿಸಿದ್ದಾರೆ.

ಎಲ್ಲ ಸರಿ ಇದೆ: ಜಾತಿ ಪ್ರಮಾಣಪತ್ರ ರದ್ದಾಗಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖಂಡ ಕೆ.ಶ್ರೀನಿವಾಸಗೌಡ. ಎಲ್ಲವೂ ಸರಿ ಇದೆ. ನಾಮಪತ್ರ ಸಲ್ಲಿಸುವ ಸಂದರ್ಭ ಅದು ಗೊತ್ತಾಗಲಿದೆ ಎಂದು ಹೇಳಿದರು.

ವೀರಯ್ಯಗೆ ಅವಕಾಶ: ಜೆಡಿಎಸ್‌­ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಸರಿಪಡಿಸಲು, ಬಿಜೆಪಿಯಲ್ಲಿ ಟಿಕೆಟ್‌ ದೊರಕದ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಅವರಿಗೆ ಅವಕಾಶ ನೀಡುವ ಬಗ್ಗೆ ಪಕ್ಷದ ಮುಖಂಡರು ಚಿಂತಿಸುತ್ತಿದ್ದಾರೆ ಎಂಬ ವದಂತಿಯೂ ಕ್ಷೇತ್ರದಲ್ಲಿ ಹರಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೀರಯ್ಯ, ಆ ಬಗ್ಗೆ ಜೆಡಿಎಸ್‌ನ ಯಾವ ಮುಖಂಡರೂ ತಮ್ಮನ್ನು ಸಂಪರ್ಕಿಸಿಲ್ಲ. ಅವಕಾಶ ದೊರೆತರೂ ಆ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಏಕೆಂದರೆ ವಿಧಾನ ಪರಿಷತ್‌ ಸದಸ್ಯ­ರಾಗಿರಲು ತಮಗೆ ಇನ್ನೂ 4 ವರ್ಷ ಅವಕಾಶವಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT