ADVERTISEMENT

ನೀರು ಮಿತವಾಗಿ ಬಳಸಿ

ವಿಶ್ವಜಲ ದಿನಾಚರಣೆಯಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸ್‌ರಾವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 12:20 IST
Last Updated 30 ಮಾರ್ಚ್ 2018, 12:20 IST

ಕೋಲಾರ: ‘ಪ್ರತಿ ವ್ಯಕ್ತಿಯು ನೀರಿನ ಮಹತ್ವ ಅರಿತು ಹಿತಮಿತವಾಗಿ ಬಳಸಬೇಕು’ ಎಂದು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸ್‌ರಾವ್‌ ಹೇಳಿದರು.ಧಾನ್ ಪ್ರತಿಷ್ಠಾನ ಮತ್ತು ಬೆಂಗಳೂರಿನ ಟೆಕ್ಸಾಸ್ ಕಂಪನಿ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವಜಲ ದಿನಾಚರಣೆಯಲ್ಲಿ ಮಾತನಾಡಿ, ‘ನೀರು ಅತ್ಯಮೂಲ್ಯ ಸಂಪತ್ತು. ಮುಗಿದು ಹೋಗುವ ಸಂಪನ್ಮೂಲವನ್ನು ಸಂರಕ್ಷಿಸದಿದ್ದರೆ ಮನುಕುಲದ ಭವಿಷ್ಯ ಕರಾಳವಾಗುತ್ತದೆ’ ಎಂದರು.

‘ವಿಶ್ವ ಸಂಸ್ಥೆಯು 1992ರಲ್ಲಿ ಸಭೆ ಸೇರಿ ನೀರಿನ ಸಮಸ್ಯೆ ಮನಗಂಡು ಜಗತ್ತಿನಾದ್ಯಂತ ನೀರಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 23ರಂದು ವಿಶ್ವಜಲ ದಿನಾಚರಣೆ ಆಚರಿಸುವ ನಿರ್ಣಯ ಕೈಗೊಂಡಿತು’ ಎಂದು ಧಾನ್ ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ಎಚ್.ಜಿ.ರಾಘವೇಂದ್ರ ತಿಳಿಸಿದರು.

‘ಮನುಷ್ಯನಿಗೆ ಜೀವನದಲ್ಲಿ ಗಾಳಿ, ನೀರು, ಬೆಳಕು ಅತ್ಯಗತ್ಯ. ಹಿರಿಯರು ಹಿಂದೆ ನೀರಿನ ಸಮಸ್ಯೆ ಅರಿತು, ಜಲ ಸಂರಕ್ಷಣೆಗಾಗಿ ಕೆರೆಗಳನ್ನು ಕಟ್ಟಿಸಿದ್ದಾರೆ. ಜತೆಗೆ ನೀರನ್ನು ಪಂಚಭೂತಗಳ ಪಟ್ಟಿಗೆ ಸೇರಿಸಿದ್ದಾರೆ. ನಾವು ಯಾವುದೇ ಉದ್ದೇಶಕ್ಕೆ ನೀರು ಬಳಸಿದರೂ ಅದು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮರೆಯಬಾರದು’ ಎಂದು ಪ್ರಗತಿಪರ ರೈತ ಅಶೋಕ್ ಕಿವಿಮಾತು ಹೇಳಿದರು.

ADVERTISEMENT

‘ಕೈಗಾರಿಕೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕಲುಷಿತವಾಗು ತ್ತಿದ್ದು, ಅದರ ನಿಯಂತ್ರಣಕ್ಕೆ ಮಂಡಳಿಯು ಕ್ರಮ ಕೈಗೊಂಡಿದೆ. ನೀರಿನ ಸಮರ್ಪಕ ಬಳಕೆ ಕುರಿತು ಜನ ಜಾಗೃತರಾಗಬೇಕು. ಪ್ರತಿ ಮನೆ ಹಾಗೂ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಕೊಳವೆ ಬಾವಿಗಳ ಜಲ ಮರುಪೂರಣ ಮಾಡಬೇಕು’ ಎಂದು ನಗರಸಭೆ ಮಾಜಿ ಸದಸ್ಯ ಕೆ.ಎನ್.ತ್ಯಾಗರಾಜ್ ಸಲಹೆ ನೀಡಿದರು.ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕ ವೆಂಕಟಪ್ಪ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವೇಮಗಲ್ ಶಾಖೆ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 6 ಲಕ್ಷ ಸಾಲ ವಿತರಿಸಲಾಯಿತು.

ಪ್ರತಿಷ್ಠಾನದ ಸದಸ್ಯರಾದ ಶಂಕರಯ್ಯ, ದೇವರಾಜು, ಬಿ.ಜಿ.ಮುನಿರಾಜು, ವಿಜಯಕುಮಾರ್, ಶ್ರೀನಿವಾಸ್, ರವಿಚಂದ್ರ, ಮಾಲಾ, ಅನಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.