ಕೋಲಾರ: ಜಿಲ್ಲೆಯಲ್ಲಿ ಎಚ್ಐವಿ ಪರೀಕ್ಷೆಗೊಳಪಟ್ಟ 29 ಸಾವಿರ ಗರ್ಭಿಣಿಯರಲ್ಲಿ 30 ಮಂದಿಗೆ ಎಚ್ಐವಿ ಸೋಂಕು ತಗುಲಿದೆ. ಮುಂದೆ ಜಗತ್ತಿಗೆ ಕಾಲಿಡುವ ಈ ಮುಗ್ಧ ಕಂದಮ್ಮಗಳು ಸಮಾಜದ ತಾತ್ಸಾರಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್ ಹೇಳಿದರು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ ಇಲಾಖೆ, ಜಿಲ್ಲಾಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್ಐವಿ ಪೀಡಿತರಿಗೆ ಸಮಾಜದಿಂದ ಅನುಭೂತಿ ಬೇಕಿದೆ. ಜಿಲ್ಲೆಯ ರಕ್ತನಿಧಿ ಕೇಂದ್ರಗಳಿಗೆ ಪ್ರತಿ ತಿಂಗಳು ಸುಮಾರು 1224 ಯೂನಿಟ್ ರಕ್ತದ ಅಗತ್ಯವಿದೆ. ಆದರೆ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಯುವ ಜನರನ್ನು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 4 ಸಾವಿರ ಎಚ್ಐವಿ ಪೀಡಿತರಲ್ಲಿ ನೂರು ಮಕ್ಕಳಿದ್ದಾರೆ. ಇವರನ್ನು ನಾವು ನೋಡುವ ದೃಷ್ಟಿಕೋನ ಬದಲಾಗಬೇಕು. ನೊಂದವರಿಗೆ ಸಹಾಯಹಸ್ತ ಚಾಚಿ. ಮಾಲೂರು ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಲುವಿನಲ್ಲಿ ರಕ್ತ ಸಂಗ್ರಹಣಾ ಕೇಂದ್ರ ಆರಂಭಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜುಲ್ಫಿಕರ ಉಲ್ಲಾ, ಕೆಲವು ದಶಕಗಳ ಹಿಂದೆ ಮಧುಮೇಹ ಬಂದರೆ ಮುಚ್ಚಿಡುತ್ತಿದ್ದರು. ಈಗ ಅಂಥ ಪರಿಸ್ಥಿತಿ ಇಲ್ಲ. ಇಂಥ ಬದಲಾವಣೆ ಎಚ್ಐವಿ ಸೋಂಕಿತರಲ್ಲೂ ಬರಬೇಕು. ಹಲವು ವೇಳೆ ಸೋಂಕಿಗೆ ಒಳಗಾಗುವರು ಶೋಷಣೆಗೆ ಒಳಗಾಗುತ್ತಾರೆ ಎಂದರು.
ಇದೇ ಸಂದರ್ಭ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾರಿ ರಕ್ತದಾನ ಮಾಡಿದ ಕಾರ್ತಿಕ್, ಕೆ.ಗಣೇಶ್, ವಿ.ಪ್ರದೀಪ್, ಕೆ.ಸಿ.ವಿನೋದ, ರಾಜೇಂದ್ರ ಸಿಂಹ, ಬಿ.ಕುಮಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಭಗವಾನದಾಸ್, ಮರಿಸ್ವಾಮಿ, ಡಾ.ಕಮಲಾಕಲ, ಐಸಿಟಿಸಿ ಆಪ್ತ ಸಮಾಲೋಚಕ ಜಯಶಂಕರ, ಕೃಷ್ಣಪ್ಪ ಮೊದಲಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.