ಬಂಗಾರಪೇಟೆ: ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮನೆ ಮಹಿಳೆಯರು ಕೂಡ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ನಾರಾಯಣಸ್ವಾಮಿ ಅವರ ಪತ್ನಿ ಶಶಿಕಲಾ, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪತ್ನಿ ಸರಸ್ವತಮ್ಮ, ಮಗ ಶಶಿಕಾಂತ್ ಕೂಡ ಪ್ರಚಾರ ನಡೆಸಿದ್ದಾರೆ.
ಶಶಿಕಲಾ ಅವರು ಪಟ್ಟಣದ ಹಲವು ವಾರ್ಡ್ಗಳ ಮನೆಮನೆಗೂ ತೆರಳಿ ಕರಪತ್ರಗಳನ್ನು ವಿತರಿಸಿ ಮತಯಾಚನೆ ಮಾಡಿದರು. ಪುರಸಭೆ ಸದಸ್ಯರಾದ ಗಂಗಮ್ಮ, ಭಾಗ್ಯಮ್ಮ, ಮುಗಿಲಮ್ಮ, ಮುಖಂಡರಾದ ವೆಂಕಟೇಶ್, ರಂಗರಾಮಯ್ಯ, ಗೋವಿದಪ್ಪ ಪಾಲ್ಗೊಂಡಿದ್ದರು.
ಎಂ.ನಾರಾಯಣಸ್ವಾಮಿ ಅವರ ಪತ್ನಿ ಸರಸ್ವತಮ್ಮ ಹುತ್ತೂರು ಹೋಬಳಿಯ ಗ್ರಾಮಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಮಗ ಶಶಿಕಾಂತ್ ಅವರ ಗಮನ ಪಟ್ಟಣದಲ್ಲಿ ಕೇಂದ್ರಿತವಾಗಿದೆ.
ಪ್ರಚಾರದ ವೇಳೆ ಮುಖಭಂಗ
ಬಂಗಾರಪೇಟೆ: ಮತ ಯಾಚಿಸಲು ಹೋದ ಶಾಸಕ, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿಯವರಿಗೆ ಗ್ರಾಮಸ್ಥರ ಪ್ರತಿಭಟನೆ ಬಿಸಿ ತಟ್ಟಿದ ಘಟನೆ ತಾಲ್ಲೂಕಿನ ಕೊಂಗರಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಗ್ರಾಮದಲ್ಲಿ ಪ್ರಚಾರಕ್ಕೆ ಮುಂದಾದ ಶಾಸಕರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ರಸ್ತೆ ಅಭಿವೃದ್ಧಿಗೊಳಿಸಿಲ್ಲ. ನೀರಿನ ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದರು.
ತಾಲ್ಲೂಕಿನ ಸಿದ್ದನಹಳ್ಳಿ, ವಟ್ರಕುಂಟೆ, ಹನುಮಂತರಾಯನ ದಿನ್ನೆ ಮತ್ತಿತರ ಗ್ರಾಮಗಳಲ್ಲಿ ಪ್ರಚಾರ ನಡೆಸುವ ವೇಳೆ ಗ್ರಾಮಸ್ಥರು ಮೊದಲು ನೀರಿನ ಸಮಸ್ಯೆ ಬಗೆ ಹರಿಸಿ. ನಂತರ ಮತ ಕೇಳಿ ಎಂದು ಆಗ್ರಹಿಸಿದರು.
ಜನ, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೆ ಪರಿತಪಿಸುವಂತಾಗಿದೆ. ಮೊದಲು ನೀರಿನ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.