ADVERTISEMENT

ಪ್ರಕೃತಿ ವಿನಾಶ; ವಿಕೋಪಕ್ಕೆ ನಾಂದಿ: ಕಳವಳ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:55 IST
Last Updated 6 ಜೂನ್ 2013, 5:55 IST

ಕೋಲಾರ: ನಗರದಲ್ಲಿ ವಿವಿಧೆಡೆ ಅರಣ್ಯ ಇಲಾಖೆ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆ ಜರುಗಿತು.
ನಗರದ ನಚಿಕೇತ ವಿದ್ಯಾರ್ಥಿನಿಲಯದ ಆವರಣದಲ್ಲಿ ಅರಣ್ಯ ಇಲಾಖೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡಿದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಗಿಡಮರಗಳ ಉಳಿವಿನಿಂದ ಪರಿಸರ ಅಭಿವೃದ್ಧಿ ಸಾಧ್ಯ. ಪರಿಸರ ನಾಶದಿಂದ ಪ್ರಕೃತಿ ವಿಕೋಪಕ್ಕೆ ತಿರುಗಿದರೆ ಜೀವಸಂಕುಲದ ಅಸ್ತಿತ್ವಕ್ಕೇ ಸಂಚಕಾರ ಬರುತ್ತದೆ ಎಂದರು.

ಪರಿಸರ ಸಂರಕ್ಷಣೆಯಿಂದ ಮಾತ್ರ ಜೀವವೈವಿಧ್ಯದ ಉಳಿವು ಸಾಧ್ಯ. ಗಿಡಗಳನ್ನು ನೆಡುವುದರ ಜೊತೆಗೆ ನೀರನ್ನು ಮಿತವಾಗಿ ಬಳಸುವ ಪದ್ಧತಿಯನ್ನೂ ಗಂಭೀರವಾಗಿ ಅಳವಡಿಸಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅತ್ಯಗತ್ಯ. ಅದರ ಜೊತೆಗೆ, ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡು ಪ್ರತಿ ಹನಿ ನೀರನ್ನೂ ಸಂರಕ್ಷಿಸಬೇಕು.ೆ ಎಂದು ಹೇಳಿದರು.

ನಗರ ಪ್ರದೇಶಗಳ ಹಸಿರೀಕರಣ ಯೋಜನೆಯಲ್ಲಿ ಇಲಾಖೆಯು ಜಿಲ್ಲೆಯ ಎಲ್ಲೆಡೆ ಸುಮಾರು 2.5 ಸಾವಿರ ಗಿಡಗಳನ್ನು ನೆಡುವ ಉದ್ದೇಶವನ್ನು ಹೊಂದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಮುನೇಗೌಡ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮರಿಮಾದಯ್ಯ, ನಗರಸಭೆ ಆಯುಕ್ತ ಮಹೇಂದ್ರಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಜಿ.ಎಫ್.ಬದನೂರು, ರಾಜ್ಯ ಜೈವಿಕ ಇಂಧನ ಮಂಡಳಿ ಪ್ರತಿನಿಧಿ, ಸಂಕಲ್ಪ ಸ್ವಯಂಸೇವಾ ಸಂಸ್ಥೆ ಕಾರ್ಯದರ್ಶಿ ಶಾರದಾ, ಯಶಸ್ವಿನಿ ಮಹಿಳಾ ಮಂಡಳಿ ಕಾರ್ಯದರ್ಶಿ ಕೆ.ಎಸ್.ನಾಗವೇಣಿ. ಧನ್ವಂತರಿ ಸೇವಾಸಂಸ್ಥೆಯ ಶಿಲ್ಪಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.