ಕೋಲಾರ: ಸಂಕ್ರಾಂತಿ ಹಬ್ಬ ಹೊಸ್ತಿಲಲ್ಲಿರುವ ಹೊತ್ತಿನಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು ರೈತರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ರೈತರಿಂದ ಪಡೆಯುವ ಪ್ರತಿ ಲೀಟರ್ ಹಾಲಿಗೆ ₨ 2 ವಿಶೇಷ ದರವನ್ನು ನೀಡಲಿದೆ. ಈ ಕೊಡುಗೆ ಜ.1ರಿಂದ ಮಾ.31ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೋಮುಲ್ ಅಧ್ಯಕ್ಷ ಕೆ.ಗುಡಿಯಪ್ಪ ತಿಳಿಸಿದ್ದಾರೆ.
ನೂತನ ವರ್ಷದ ಪ್ರಾರಂಭದಲ್ಲಿ ಹಾಲಿನ ದರ ಪರಿಷ್ಕರಣೆ ಮಾಡುವ ಪದ್ಧತಿಯ ಬಗ್ಗೆ ಗುರುವಾರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪ್ರತಿ ಲೀಟರಿನಲ್ಲಿ ಶೇ.3.5 ರಿಂದ ಶೇ 3.7 ಜಿಡ್ಡಿನಾಂಶವಿರುವ ಹಾಲನ್ನು ಪೂರೈಸಿದವರಿಗೆ ಮಾತ್ರ ಈ ದರ ಅನ್ವಯವಾಗುತ್ತದೆ. ಮಾರುಕಟ್ಟೆಯಲ್ಲಿ ಹಾಲು ಉತ್ಪನ್ನಗಳ ದರ ಹೆಚ್ಚಳವಾಗಿದೆ.
ಜೊತೆಗೆ ಕ್ಷೀರಭಾಗ್ಯ ಯೋಜನೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಒಕ್ಕೂಟದ ಉತ್ಪನ್ನಗಳಿಗೆ ಉತ್ತಮ ಮಾರಾಟ ದರ ಪ್ರಾಪ್ತವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಒಟ್ಟು ಹಾಲಿನಲ್ಲಿ ಶೇ. 63 ರಷ್ಟು ಮಾತ್ರ 8.5 ಕ್ಕಿಂತ ಹೆಚ್ಚಿಗೆ ಎಸ್ಎನ್ಎಫ್. ಅಂಶವನ್ನು ಹೊಂದಿದೆ. ಗುಣಮಟ್ಟದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಆಹಾರ ಸುರಕ್ಷತಾ ಕಾಯಿದೆ ಅನ್ವಯ ಗುಣಮಟ್ಟದ ಹಾಲು ಶೇಖರಣೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವುದು ಅನಿವಾರ್ಯ.. ಹೀಗಾಗಿ ಗುಣಮಟ್ಟದ ಹಾಲನ್ನು ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.