ಗೌರಿಬಿದನೂರು: ಬೆಂಗಳೂರು ನಗರದ ತ್ಯಾಜ್ಯವನ್ನು ತಾಲ್ಲೂಕಿನ ಹೊಸೂರು ಗ್ರಾಮದ ಸಮೀಪ ಎಮ್ಮೆಗುಡ್ಡದ ಅರಣ್ಯ ಪ್ರದೇಶದಲ್ಲಿ ಹಾಕುವುದನ್ನು ವಿರೋಧಿಸಿ ಈ ಭಾಗದ ಗ್ರಾಮಸ್ಥರು ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಕಸವನ್ನು ತಂದು ಎಮ್ಮೆಗುಡ್ಡದ ಅರಣ್ಯ ಪ್ರದೇಶದಲ್ಲಿ ಸುರಿಯುವುದರಿಂದ ಇಲ್ಲಿನ ಪರಿಸರ ನಾಶವಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಇಲ್ಲಿನ ಉತ್ತಮ ಪರಿಸರವನ್ನು ಹಾಳು ಮಾಡಿದಂತಾಗುತ್ತದೆ. ಬೆಂಗಳೂರಿನ ಕಸವನ್ನು ಯಾವುದೇ ಕಾರಣಕ್ಕೂ ಇಲ್ಲಿ ಹಾಕಲು ಬಿಡುವುದಿಲ್ಲ ಎಂದು ಹೊಸೂರು ಗ್ರಾಮದ ಮುಖಂಡ ಎಚ್.ವಿ.ಮಂಜುನಾಥ್ ಹೇಳಿದರು.
ಈ ಭಾಗದ ಮಾಚೇನಹಳ್ಳಿ, ನಡುವಲಹಳ್ಳಿ, ಗೊಡ್ಡಾವಲಹಳ್ಳಿ, ಸೋನಗಾನಹಳ್ಳಿ, ಹುಣಸೇಕುಂಟೆ, ಸೋಮಶೆಟ್ಟಿಹಳ್ಳಿ ಮತ್ತಿತರ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಎಮ್ಮೆಗುಡ್ಡದ ಅರಣ್ಯ ಪ್ರದೇಶದಲ್ಲಿ ಕಸ ತಂದು ಸುರಿಯುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಮೇಲ್ಮಟ್ಟದ ಅಧಿಕಾರಿಗಳಿಂದ ನಡೆಯುತ್ತಿದ್ದು ಈ ವಿಷಯ ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ರವಿನಾರಾಯಣರೆಡ್ಡಿ, ಜಿ.ಪಂ ಸದಸ್ಯ ಸಿ.ಆರ್.ನರಸಿಂಹಮೂರ್ತಿ, ಪುರಸಭೆ ಸದಸ್ಯ ಕೆ.ಎಸ್.ಅನಂತರಾಜ್, ಹೊಸೂರು ಗ್ರಾ.ಪಂ. ಅಧ್ಯಕ್ಷ ಅಶ್ವತ್ಥನಾರಾಯಣರಾವ್, ಜೆಡಿಎಸ್ ಮುಖಂಡ ಶಿವರಾಮರೆಡ್ಡಿ, ಶ್ರೀನಿವಾಸ್ ಹಾಗೂ ಈ ಭಾಗದ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.