ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಚಲ್ಡಿಗಾನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಕೋತಿ ಹಿಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯ ಕೋತಿಗಳನ್ನು ಹಿಡಿದು ಕಬ್ಬಿಣದ ಪಂಜರಕ್ಕೆ ಸೇರಿಸಲಾಗಿದೆ.
ಹಳ್ಳಿಯಲ್ಲಿ ಕೋತಿಗಳ ಹಾವಳಿ ಹೆಚ್ಚಿ 5 ಮಂದಿ ಕೋತಿ ಕಡಿತಕ್ಕೆ ಒಳಗಾಗಿದ್ದರು. ಆ ಬಗ್ಗೆ ‘ಪ್ರಜಾವಾಣಿ’ ವಿವರವಾದ ವರದಿ ಪ್ರಕಟಿಸಿತ್ತು. ವರದಿಯ ಫಲಶ್ರುತಿಯಾಗಿ ಗ್ರಾಮ ಪಂಚಾಯಿತಿ ಹಳ್ಳಿಗರ ನೆರವಿನಿಂದ ಕೋತಿ ಹಿಡಿಸುವ ಕಾರ್ಯಾಚರಣೆ ಕೈಗೊಂಡಿದೆ. ಆಂಧ್ರಪ್ರದೇಶದಿಂದ ಕೋತಿ ಹಿಡಿಯುವವರನ್ನು ಕರೆಸಲಾಗಿದೆ.
ಅವರು ನೆಲಗಡಲೆ ಮತ್ತಿತರ ಆಹಾರ ಪದಾರ್ಥ ಬಳಸಿ ಕೋತಿಗಳನ್ನು ಪಂಜರಕ್ಕೆ ಕೆಡವುತ್ತಿದ್ದಾರೆ. ಪಂಜರದಲ್ಲಿನ ಕೋತಿಗಳ ಹಸಿವು ನೀಗಲು ಹಳ್ಳಿಯ ಪ್ರತಿ ಮನೆಯಿಂದಲೂ ಒಂದು ಮುದ್ದೆಯಂತೆ ಕೊಡಲಾಗುತ್ತಿದೆ. ಸ್ವಯಿಚ್ಛೆಯಿಂದ ಕೋತಿಗಳಿಗೆ ಆಹಾರ ನೀಡುತ್ತಿದ್ದಾರೆ.
ಗ್ರಾಮದಲ್ಲಿ ವಾಸವಾಗಿದ್ದು, ಗ್ರಾಮಸ್ಥರಿಗೆ ಸಿಂಹಸ್ವಪ್ನವಾಗಿದ್ದ ಕೋತಿಗಳನ್ನು ಹಿಡಿದ ಬಳಿಕ ದೂರದ ಕಾಡಿಗೆ ಬಿಡಲಾಗುವುದು ಎಂದು ಕೋತಿ ಹಿಡಿಯುವವರು ಪ್ರಜಾವಾಣಿಗೆ ತಿಳಿಸಿದರು. ಗ್ರಾಮಸ್ಥರನ್ನು ಕಚ್ಚುತ್ತಿದ್ದ ಕೋತಿಗಳನ್ನು ಹಿಡಿಸಲು ಮುಂದಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಗ್ರಾಮದ ನಾಗರಿಕರು ಅಭಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.