ADVERTISEMENT

ಮಾಸದ ಸಾವಿರ ಸವಿ ಸವಿ ನೆನಪು...

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 9:25 IST
Last Updated 8 ಜನವರಿ 2011, 9:25 IST

ಮುಳಬಾಗಲು: ಇಲ್ಲೊಂದು ಶಾಲೆ. ಈಗ ಅದಕ್ಕೆ 50 ವರ್ಷ ತುಂಬಿದೆ. ಆದರೆ ನೆನಪುಗಳು ಮಾತ್ರ ಮಾಸಿಲ್ಲ. ಈ ಸುಸಂದರ್ಭದಲ್ಲಿ ಶಾಲಾಡಳಿತ ಸುವರ್ಣ ಮಹೋತ್ಸವ ಆಚರಿಸಲು ಸಜ್ಜಾಗಿದೆ. ಇದು ಕೋಲಾರ ಜಿಲ್ಲೆಯಲ್ಲಿ ಆರಂಭವಾದ ಎರಡನೇ ಶಾಲೆ ಎಂಬ ಹೆಗ್ಗಳಿಕೆ  ಸಹ ಇದಕ್ಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿ ಹೆಸರು ಪಡೆದು ಆರಂಭವಾದ ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಜನವರಿ 9ಕ್ಕೆ ಸುವರ್ಣ ಮಹೋತ್ಸವವನ್ನು ಹಳೆಯ ನೆನಪುಗಳನ್ನು ಮೆಲುಕು ಹಾಕಲು ತಯಾರಿ ನಡೆಸಿದೆ.1956ರಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರ ಆಡಳಿತಾವಧಿಯಲ್ಲಿ ಈ ಶಾಲೆ ಆರಂಭವಾಯಿತು.

 ದೇವರಾಯಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರೌಢಶಾಲೆಯ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಾಗ ಪ್ರೌಢಶಾಲೆ ಮಂಜೂರು ಮಾಡುತ್ತಿವೆ, ಶಾಲಾ ಕಟ್ಟಡ ನೀವೆ ಕಟ್ಟಿಕೊಳ್ಳಿ ಎಂದು ಸೂಚಿಸಿತು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಶ್ರಮದಾನದ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಿಸಿದರು. ಗ್ರಾಮದ ಡಾ.ಅಯ್ಯರ್, ಡಾ.ವಿಶ್ವನಾಥ ಅಯ್ಯರ್, ಡಿ.ರಾಮ– ಅಯ್ಯರ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಅಂದು ಮೂವತ್ತು ವಿದ್ಯಾರ್ಥಿಗಳೊಂದಿಗೆ ಈ ಶಾಲೆ ಆರಂಭವಾಯಿತು.

ಶಾಲೆಯ 300 ವಿದ್ಯಾರ್ಥಿಗಳಲ್ಲಿ ಶೇಕಡಾ 60 ಮಂದಿ ವಿದ್ಯಾರ್ಥಿಗಳು ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಸೇರಿದವರು. ಉತ್ತಮ ಆಟದ ಮೈದಾನ, ಪ್ರಯೋಗಾಲಯ, ಗಣಕಯಂತ್ರ ವಿಭಾಗ, ಗ್ರಂಥಾಲಯ ಕ್ರೀಡಾ ವಿಭಾಗ ಎಲ್ಲಕ್ಕಿಂತಲೂ ಹೆಚ್ಚಾಗಿ ಉತ್ತಮ ಪರಿಸರ ಹೊಂದಿದೆ. 14 ಮಂದಿ ನುರಿತ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣದಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಲಿ ಫಲಿತಾಂಶ ಶೇ.90ಕ್ಕಿಂತ ಹೆಚ್ಚು ಪಡೆಯುತ್ತಿದೆ.

 2005 ಹಾಗೂ 2007ರಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ವಿಜ್ಞಾನ ಪ್ರದರ್ಶನದಲ್ಲಿ ಬಹುಮಾನ ಪಡೆಯುವುದರ ಮೂಲಕ ಶಾಲೆಗೆ ಗೌರವ ತಂದಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲಾ ಸುವರ್ಣ ಮಹೋತ್ಸವದ ಅಂಗವಾಗಿ ಗ್ರಂಥಾಲಯ ಭವನ, ರಂಗಮಂದಿರ, ಸೈಕಲ್ ಸ್ಟಾಂಡ್ ನಿರ್ಮಿಸಿದ್ದಾರೆ. ಇದುವರೆಗೂ 5000 ಸಾವಿರಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. 1982ರಲ್ಲಿ ನಡೆದ ಬೆಳ್ಳಿ ಹಬ್ಬಕ್ಕೆ  ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ವಿ.ಎಸ್. ಕೃಷ್ಣಯ್ಯರ್ ಇತರರು ಭಾಗವಹಿಸಿದ್ದರು.

ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಇದೇ ಗ್ರಾಮದ ಡಾ.ಎಸ್.ಮಂಜುನಾಥ್, ಎಸ್.ಬಾಲಸು–ಬ್ರಮಣ್ಯಂ, ಎಂ.ಎನ್.ಅನಿತಾ, ಯುಎಸ್‌ಎನಲ್ಲಿ ವಾಸವಾಗಿದ್ದಾರೆ. ಕೆ.ಎಸ್.ರಘುನಾಥ್ ಮಲೇಶಿಯಾದಲ್ಲಿ ಡಿ.ಆರ್.ದೇವರಾಜ್. ಡಾ.ಟಿ.ಎ.ನಾಗರಾಜ್, ಟಿ.ಎ.ಶ್ರೀನಿವಾಸ್, ಎಸ್.ಶ್ರೀನಿವಾಸ್ ಮದ್ರಾಸ್‌ನಲ್ಲಿದ್ದಾರೆ. ಹಾಲಿ ಮುಖ್ಯ ಶಿಕ್ಷಕ ಜಿ.ಮುನಿವೆಂಕಟಪ್ಪ ಇದೇ ಶಾಲೆಯಲ್ಲಿ ಓದಿ ಇದೇ ಶಾಲೆಯಲ್ಲಿ ಕಳೆದ ವಾರ ನಿವೃತ್ತರಾಗಿರುವುದು ವಿಶೇಷ. ಮುನಿವೆಂಕಟಪ್ಪನವರದು ಪಕ್ಕದ ಹಳ್ಳಿ ಈ ಶಾಲೆ ಆರಂಭವಾಗದಿದ್ದರೆ ತಮ್ಮಂತಹವರು ಕೂಲಿ ಮಾಡಿ ಬದುಕಬೇಕಾದ ಪರಿಸ್ಥಿತಿ ಅ ದಿವಸಗಳಲ್ಲಿತ್ತು ಎಂಬುದು.

 ಗ್ರಂಥಾಲಯ ಮತ್ತು ಸೈಕಲ್ ಸ್ಟ್ಯಾಂಡ್ ದಿ. ಆರ್.ಎಸ್.ನಾರಾಯಣ ಅಯ್ಯರ್ ಅವರ ಮಕ್ಕಳು ಹಾಗೂ  ಕ್ರೀಡಾ ಕೊಠಡಿಯನ್ನು ರೇಣುಕಾ ಸದಾನಂದ ಹಾಗೂ ಸೈಕಲ್ ಸ್ಟಾಂಡ್‌ನ್ನು ಡಾ.ಶಂಕರನಾರಾಯಣ ಅಯ್ಯರ್ ಮತ್ತು ಮಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.