ಬಂಗಾರಪೇಟೆ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವಿಧಾನಸಭೆ ಕ್ಷೇತ್ರಾಭಿವೃದ್ಧಿಗೆ ರೂ. 78 ಕೋಟಿ ಅನುದಾನ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದೆ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ತಾಲ್ಲೂಕಿನ ರೆಡ್ಡಿ ಹಳ್ಳಿಯಲ್ಲಿ ಸಂಪರ್ಕ ರಸ್ತೆ ಕಾಮಗಾರಿ ಯೊಂದಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೂಲ ಸೌಕರ್ಯಗಳ ಕೊರತೆಯಿರುವ ಪ್ರತಿ ಗ್ರಾಮಗಳಲ್ಲಿಯೂ ರಸ್ತೆ, ಒಳಚರಂಡಿ, ಸಮುದಾಯ ಭವನ, ಹರಿಜನ ಕಾಲೋನಿ ಅಭಿವೃದ್ಧಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ದೇವಾಲಯ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಆಸಕ್ತಿ ವಹಿಸಿದೆ. ಬಿಜೆಪಿ ಸರ್ಕಾರದ ಕೊಡುಗೆಗಳ ಸರಮಾಲೆ ಪ್ರತಿ ಗ್ರಾಮಕ್ಕೂ ತಲುಪಲಿದೆ ಎಂದರು.
ವಿಶೇಷ ಅನುದಾನದಡಿ ಮೊದಲನೇ ಕಂತಾದ ರೂ. 8 ಕೋಟಿ ಈಗಾಗಲೇ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿವೆ. ಎರಡು ದಿನದ ಹಿಂದೆ ಎರಡನೇ ಕಂತು ರೂ.18 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ಹರಿಜನ ಕೇರಿಗಳ ಅಭಿವೃದ್ಧಿಗಾಗಿ ರೂ. 1.60 ಲಕ್ಷ, ಮುಜರಾಯಿ ಇಲಾಖೆಗೆ ಸೇರಿದ ವಿವಿಧ 90 ದೇವಸ್ಥಾನಗಳ ಅಭಿವೃದ್ಧಿ ಗಾಗಿ ರೂ. 1.25 ಲಕ್ಷ, ಬೂದಿಕೋಟೆ ಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕ್ಕಾಗಿ ರೂ. 74 ಲಕ್ಷ, ಸ್ತ್ರೀಶಕ್ತಿ ಸಮುದಾಯ ಕೇಂದ್ರ ಭವನ ನಿರ್ಮಾಣಕ್ಕೆ ರೂ.10 ಲಕ್ಷ ಮಂಜೂರಾಗಿ ಕಾಮಗಾರಿ ಪ್ರಗತಿ ಯಲ್ಲಿದೆ ಎಂದರು.
ತಾಲ್ಲೂಕಿನ ರೆಡ್ಡಿಹಳ್ಳಿಯಲ್ಲಿ ಸಂಪರ್ಕ ರಸ್ತೆ, ಡಿ.ಕೆ.ಹಳ್ಳಿಯಲ್ಲಿ ಜಲಾನಯನ ಅಭಿವೃದ್ಧಿ ಕಾಮಗಾರಿ, ಭಾರತ್ ನಗರ, ಎಚ್.ಪಿ. ಕಾಲೋನಿಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ಹುತ್ತೂರು ಹೋಬಳಿ ವ್ಯಾಪ್ತಿಯಲ್ಲಿ ರೂ.2 ಕೋಟಿ ಮೌಲ್ಯದ ವಿವಿಧ 41 ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
ಬೂದಿಕೋಟೆ ಹೋಬಳಿ ವ್ಯಾಪ್ತಿಯ ಆಲಂಬಾಡಿ ಜ್ಯೋತೇನಹಳ್ಳಿ ಗ್ರಾ.ಪಂ.ಗೆ ಸೇರುವ ಕೊಂಡಹಳ್ಳಿಯಲ್ಲಿ ರೂ. 4 ಲಕ್ಷ ವೆಚ್ಚದ, ದೆಬ್ಬನಹಳ್ಳಿ ಗ್ರಾಮದಲ್ಲಿ ರೂ. 3.10 ಲಕ್ಷ ವೆಚ್ಚದ, ಗಾಜಗ ಗ್ರಾಮದಲ್ಲಿ ರೂ.5 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಆಲಂಬಾಡಿ ಜ್ಯೋತೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಿಂಗಮ್ಮ, ಎಸ್.ಕೆ. ವೆಂಕಟರಾಮಯ್ಯ, ತಾ.ಪಂ.ಸದಸ್ಯೆ ಲಕ್ಷ್ಮೀ ಚಕ್ರವರ್ತಿ, ಬೂದಿಕೋಟೆ ಗ್ರಾ.ಪಂ.ಅಧ್ಯಕ್ಷ ಬಿ.ಕೃಷ್ಣಪ್ಪ ಶೆಟ್ಟಿ, ಕೊಂಡನಹಳ್ಳಿ ನಾರಾಯಣಸ್ವಾಮಿ, ವೆಂಕಟೇಶಪ್ಪ, ಮಾರ್ಕಂಡೇಗೌಡ, ಹೊಸರಾಯಪ್ಪ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.