ಕೋಲಾರ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಸಿದ ಕಾಮಗಾರಿಯ ಹಣ ಬಿಡುಗಡೆ ಮಾಡಲು ತಾವು ಕೆಲಸ ಮಾಡುವ ಗ್ರಾಮ ಪಂಚಾಯಿತಿ ಸದಸ್ಯರಿಂದಲೇ 20 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬುಧವಾರ ಮಧ್ಯಾಹ್ನ 3ರ ವೇಳೆಗೆ ನಡೆದಿದೆ.
ತಾಲ್ಲೂಕಿನ ಉರಿಗಿಲಿ ಗ್ರಾಮ ಪಂಚಾಯಿತಿಯ ಅಧಿಕಾರಿ ರುಕ್ಮಿಣಿ ಲೋಕಾಯುಕ್ತ ಪೊಲಿಸರಿಗೆ ಸಿಕ್ಕಿಬಿದ್ದವರು. ಅದೇ ಗ್ರಾ.ಪಂ.ಸದಸ್ಯ, ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದ ನಾರಾಯಣರೆಡ್ಡಿ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.
ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 5 ಲಕ್ಷ ಮೌಲ್ಯದ ಕಾಮಗಾರಿಗಳನ್ನು ನಡೆಸಿದ್ದರು. ಅದಕ್ಕೆ ಸಂಬಂಧಿಸಿ ಕೂಲಿಯಾಳುಗಳ ಬಾಬ್ತು ಮತ್ತು ಸಾಮಗ್ರಿಗಳ ಬಾಬ್ತನ್ನು ಬಿಡುಗಡೆ ಮಾಡಲು ಅಧಿಕಾರಿಯು ರೂ 20 ಸಾವಿರ ಲಂಚಕ್ಕೆ ಆಗ್ರಹಿಸಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಎ.ಬಿ.ಸುಧಾಕರ್ ನೇತೃತ್ವದಲ್ಲಿ ಡಿಎಸ್ಪಿ ನಾಗರಾಜ್, ಇನ್ಸ್ಪಕ್ಟರ್ಗಳಾದ ಅಶ್ವಥನಾರಾಯಣ ಮತ್ತು ಲೋಕೇಶ್ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.