ADVERTISEMENT

ಶಾಲಾಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 7:40 IST
Last Updated 18 ಜನವರಿ 2011, 7:40 IST

ಶ್ರೀನಿವಾಸಪುರ: ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯ ಸಕ್ರಿಯ ಪಾತ್ರ ಅಗತ್ಯವಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹ್ಮದ್ ಖಲೀಲ್ ಮನವಿ ಮಾಡಿದರು.

ತಾಲ್ಲೂಕಿನ ಕೋಡಿಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯ ವಕೀಲ ಕೆ.ಬಿ.ನಾರಾಯಣಸ್ವಾಮಿ ಅವರು ಶಾಲೆಗೆ ತಮ್ಮ 1 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಶಿಕ್ಷಣ ಇಲಾಖೆ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ಶಿಕ್ಷಕರು ಇಂತಹ ದಾನಿಗಳ ನೆರವನ್ನು ಪಡೆದು ಶಾಲಾಭಿವೃದ್ಧಿ ಸಾಧಿಸಬೇಕು ಎಂದರು.

ಬೆಂಗಳೂರಿನ ಹಿರಿಯ ವಕೀಲ ಕೆ.ಬಿ.ನಾರಾಯಣಸ್ವಾಮಿ ಮಾತನಾಡಿ, ಈ ಶಾಲೆ ನನ್ನ ಊರಿನ ಶಾಲೆ. ನಾನು ಓದಿದ ಶಾಲೆ. ಆ ಅಭಿಮಾನದಿಂದ ನನ್ನ ಒಂದು ಎಕೆರೆ ಜಮೀನನ್ನು ಶಾಲೆಗೆ ದಾನವಾಗಿ ನೀಡಿದ್ದೇನೆ. ಇಷ್ಟೇ ಅಲ್ಲದೆ ಶಾಲೆಯ ಅಭಿವೃದ್ಧಿಗೆ ಪೂರಕವಾದ ಎಲ್ಲ ಸೌಲಭ್ಯ ಕಲ್ಪಿಸಿಕೊಡುತ್ತೇನೆ ಎಂದು ಹೇಳಿದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ನಾಗರಾಜ್, ತಾಲ್ಲೂಕು ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ಲಕ್ಷ್ಮಣರೆಡ್ಡಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಮದ ಹಲವರು ಸಹಕರಿಸುತ್ತಿದ್ದಾರೆ ಎಂದು ಹೇಳಿ ಅವರ ಸೇವೆ ಪ್ರಶಂಸಿಸಿದರು. 

ದಾನಿಗಳಾದ ಕೆ.ಆರ್.ಶಿವಾನಂದ, ಕೆ.ಎಂ.ಶಿವಾರೆಡ್ಡಿ, ಕೆ.ವಿ.ರಾಮಚಂದ್ರ, ಶಿಕ್ಷಕರ ಸಂಘದ ಮುಖಂಡರಾದ ವಿ.ರವಿಕುಮಾರ್, ಆರ್.ರವಿಕುಮಾರ್, ಎಲ್.ಆನಂದ್, ಡಿ.ಆರ್.ವೆಂಕಟರಾಮೇಗೌಡ, ಎನ್.ವಿ.ವೇಣುಗೋಪಾಲ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಜಿ.ಶಂಕರ್, ಉಕ್ಮಣಿಯಮ್ಮ, ರಾಮಸುಬ್ಬು, ತಿಪ್ಪಣ್ಣ, ಗ್ರಾಪಂ ಸದಸ್ಯ ಕೆ.ಬಿ.ಸುಬ್ಬಾರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷೆ ಎಸ್.ಗೀತಾ ಉಪಸ್ಥಿತರಿದ್ದರು.ಶಿಕ್ಷಕ ಎನ್.ಮಂಜುನಾಥ್ ನಿರೂಪಿಸಿದರು. ಮುಖ್ಯ ಶಿಕ್ಷಕ ಜಿ.ಆರ್.ರಮೇಶ್ ಸ್ವಾಗತಿಸಿದರು. ಕೆ.ಎಂ.ಸುಧಾಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.