ADVERTISEMENT

ಶಿವಭಕ್ತಿಯಲ್ಲಿ ಮಿಂದ ಭಕ್ತಸಾಗರ!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 6:35 IST
Last Updated 3 ಮಾರ್ಚ್ 2011, 6:35 IST
ಶಿವಭಕ್ತಿಯಲ್ಲಿ ಮಿಂದ ಭಕ್ತಸಾಗರ!
ಶಿವಭಕ್ತಿಯಲ್ಲಿ ಮಿಂದ ಭಕ್ತಸಾಗರ!   

ಕೋಲಾರ: ಶಿವರಾತ್ರಿ ಪ್ರಯುಕ್ತ ಬುಧವಾರ ಇಡೀ ಹಗಲು ಮತ್ತು ಇರುಳು ನಗರ ಮತ್ತು ತಾಲ್ಲೂಕಿನ ಸುತ್ತಮುತ್ತಲಿನ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಭಜನೆ, ಜಾಗರಣೆ ನಡೆಯಿತು. ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಆಚರಿಸಿ ನಿಷ್ಠೆಯಿಂದ ಶಿವನಿಗೆ ಪೂಜೆ ಸಲ್ಲಿಸಿದರು. ಜಾಗರಣೆ ಪ್ರಯುಕ್ತ ಭಜನೆ, ಹರಿಕಥೆ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.

ನಗರದ ಕೋಟೆಯಲ್ಲಿರುವ ಸೋಮೇಶ್ವರ ದೇವಾಲಯ, ಅರಳೇಪೇಟೆಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ, ದೊಡ್ಡಪೇಟೆಯಲ್ಲಿರುವ ನಂಜುಂಡೇಶ್ವರ ದೇವಾಲಯ, ಕಾಳಮ್ಮಗುಡಿ ರಸ್ತೆಯಲ್ಲಿರುವ ಕಮ್ಮಟೇಶ್ವರ ದೇವಾಲಯ, ಅಂತರಗಂಗೆ ಬೆಟ್ಟದ ತಪ್ಪಲಲ್ಲಿರುವ ಜಲಕಂಠೇಶ್ವರ ದೇವಾಲಯ, ಬೆಟ್ಟದಲ್ಲಿರುವ ಕಾಶಿವಿಶ್ವೇಶ್ವರ ದೇವಾಲಯ, ಅರಾಭಿಕೊತ್ತನೂರಿನ ಶಿವ ದೇವಾಲಯಗಳು, ತೇರಳ್ಳಿ ಬೆಟ್ಟದಲ್ಲಿರುವ ಗೌರಿಗಂಗಾಧರೇಶ್ವರ ದೇವಾಲಯ, ತಾಲೂಕಿನ ವಕ್ಕಲೇರಿಯ ಮಾರ್ಕಂಡೇಶ್ವರ ಬೆಟ್ಟದಲ್ಲಿರುವ ಮಾರ್ಕಂಡೇಶ್ವರ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬೆಳಗಿನ ಜಾವದಿಂದಲೇ ಪೂಜಾ ಕಾರ್ಯಗಳು ಆರಂಭವಾದವು. ರಾತ್ರಿ ನಡೆದ ಜಾಗರಣೆ ಕಾರ್ಯಕ್ರಮಗಳಲ್ಲೂ ಸಾವಿರಾರು ಭಕ್ತರು ಪಾಲ್ಗೊಂಡರು.

ಚೊಕ್ಕಳ್ಳಿಯಲ್ಲಿ: ತಾಲ್ಲೂಕಿನ ಚೊಕ್ಕಳ್ಳಿಯ ಚಿನ್ಮಯ ಸಾಂದೀಪನಿ ಆಶ್ರಮದಲ್ಲಿ ಲಕ್ಷಾರ್ಚನೆಯನ್ನು ಮಾಡಲಾಯಿತು. ಫೆ.23ರಿಂದ ನಡೆದ ಲಕ್ಷಾರ್ಚನೆಯನ್ನು ಬುಧವಾರ ಕೊನೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವಾಮಿ ದತ್ತ ಮಹಾನಂದ ಸರಸ್ವತಿ ವಿಶೇಷ ಉಪನ್ಯಾಸ ನೀಡಿದರು. ಪೂರ್ಣಪ್ರಜ್ಞಾನಂದ ಸರಸ್ವತಿ, ದತ್ತ ಉಪಸ್ಥಿತರಿದ್ದರು.
ವಕ್ಕಲೇರಿಯಲ್ಲಿ: ಮಾರ್ಕಂಡೇಶ್ವರ ಉತ್ಸವಮೂರ್ತಿಯನ್ನು ರಾತ್ರಿ 8 ಗಂಟೆಗೆ ಬೆಟ್ಟದಲ್ಲಿರುವ ದೇವಾಲಯಕ್ಕೆ ಮೆರವಣಿಗೆ ಮೂಲಕ ತರಲಾಯಿತು. ನಂತರ ಭಜನೆ, ಮಾರ್ಕಂಡೇಶ್ವರ ಸ್ವಾಮಿಜೀವನ ಚರಿತ್ರೆಯ ವಿಡಿಯೋ ಚಿತ್ರಪ್ರದರ್ಶನವವನ್ನುಏರ್ಪಡಿಸಲಾಗಿತ್ತು.

ಹಿಂದೂ ಸಮಾವೇಶ:
ಶಿವರಾತ್ರಿಯ ಪ್ರಯುಕ್ತ ಶ್ರೀರಾಮಸೇನೆಯು ನಗರದ ಹೊರವಲಯದ ಪಾಕರಹಳ್ಳಿಯಲ್ಲಿ ಹಿಂದೂ ಸಮಾವೇಶವನ್ನು ಏರ್ಪಡಿಸಲಾಗಿತ್ತು.
ಆನಂದಮಾರ್ಗ ಮಠದ ಚಿನ್ಮಯಾನಂದ ಅವಧೂತ ಉಪಸ್ಥಿತರಿದ್ದರು.  ಡಾ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೇನೆಯ ಪ್ರಮುಖ ನವೀನ್‌ಕುಮಾರ್ ಮುಖ್ಯಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.