ADVERTISEMENT

ಶ್ರವಣ ದೋಷ ಶಾಪವಲ್ಲ

ವಿಶ್ವ ಶ್ರವಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 10:58 IST
Last Updated 4 ಮಾರ್ಚ್ 2018, 10:58 IST
ವಿಶ್ವ ಶ್ರವಣ ದಿನಾಚರಣೆ ಸಮಾರಂಭವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್‌ ಉದ್ಘಾಟಿಸಿದರು
ವಿಶ್ವ ಶ್ರವಣ ದಿನಾಚರಣೆ ಸಮಾರಂಭವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್‌ ಉದ್ಘಾಟಿಸಿದರು   

ಶ್ರೀನಿವಾಸಪುರ: ಪೋಷಕರು ತಮ್ಮ ಮಕ್ಕಳ ಕಿವಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಶ್ರವಣ ದೋಷ ಕಂಡುಬಂದಲ್ಲಿ ತಜ್ಞ ವೈದ್ಯರಿಂದ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಜಿ.ಶ್ರೀನಿವಾಸ್‌ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಶ್ರವಣ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಶ್ರವಣ ದೋಷ ಶಾಪವಲ್ಲ. ಹಲವು ಕಾರಣಗಳಿಂದ ಇದು ಕಾಣಿಸಿಕೊಳ್ಳಬಹುದು. ಬಹಳಷ್ಟು ಸಂದರ್ಭಗಳಲ್ಲಿ ದೋಷ ನಿವಾರಣೆ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

ಗರ್ಭಾವಸ್ಥೆಯಲ್ಲಿ ಉಂಟಾಗುವ ಸೋಂಕು, ಅಕಾಲಿಕ ಜನನ, ಜನನದ ಸಂದರ್ಭದಲ್ಲಿ ಆಮ್ಲಜನಕದ ಕೊರತೆ, ಕೆಲವು ಔಷಧಗಳ ಬಳಕೆ ಇತ್ಯಾದಿ ಕಾರಣಗಳಿಂದ ಶ್ರವಣ ದೋಷ ಉಂಟಾಗಬಹುದು. ಗ್ರಾಮೀಣ ಪ್ರದೇಶದಲ್ಲಿ ಮೂಢನಂಬಿಕೆಯಿಂದ ಅನಗತ್ಯ ಚಿಕಿತ್ಸೆ ಅಥವಾ ಮನಬಂದ ಔಷಧ ಬಳಕೆ ಮಾಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಾರೆ. ಇದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಡಾ.ಪುಷ್ಪಲತಾ ಮಾತನಾಡಿ, ಹುಟ್ಟಿದ ಮಗುವಿಗೆ ಕಡ್ಡಾಯವಾಗಿ ಒಎಇ ಪರೀಕ್ಷೆ ಮಾಡಿಸಬೇಕು. ಇದರಿಂದ ಶ್ರವಣ ದೋಷ ಇದ್ದಲ್ಲಿ ಪತ್ತೆಯಾಗುತ್ತದೆ. ಸಮಸ್ಯೆ ಇದ್ದಲ್ಲಿ ತಜ್ಞ ವೈದ್ಯರ ನೆರವಿನಿಂದ ಮಗು ಕಿವುಡ ಹಾಗೂ ಮೂಕ ಆಗುವುದನ್ನು ತಪ್ಪಿಸಬಹುದು. ಕಿವಿ ಸೋರುವಿಕೆ ಹಾಗೂ ಶ್ರವಣ ದೋಷ ಕಂಡುಬಂದಲ್ಲಿ ತಪ್ಪದೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.

ಡಾ.ದಿವಾಕರ್‌, ಡಾ. ವಿಶ್ವನಾಥರೆಡ್ಡಿ, ಉಷಾ, ನಾಗರಾಜಶೆಟ್ಟಿ, ಮಹಮದ್‌ ಅಲಿ, ತಳಸಮ್ಮ, ಕೆ.ವಿ.ಸಿ.ರೆಡ್ಡಿ, ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.