ADVERTISEMENT

ಸಂವಿಧಾನ ಬದಲಿಸುವ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 6:37 IST
Last Updated 29 ನವೆಂಬರ್ 2017, 6:37 IST
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಎ.ವಿ.ಶಿವಶಂಕರರೆಡ್ಡಿ ಮಾತನಾಡಿದರು
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಎ.ವಿ.ಶಿವಶಂಕರರೆಡ್ಡಿ ಮಾತನಾಡಿದರು   

ಕೋಲಾರ: ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವಶ್ರೇಷ್ಠವಾಗಿದ್ದು, ಅದನ್ನು ಬದಲಿಸುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಎ.ವಿ.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಸಂವಿಧಾನವು ಶೋಷಿತರು, ಬಡವರು, ಮಹಿಳೆಯರ ಪರವಾಗಿದ್ದು, ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ಸಾಧನವಾಗಿದೆ ಎಂದರು.

ಸಂವಿಧಾನವು ಯಾವುದೇ ಜಾತಿ ಅಥವಾ ಪಂಗಡಕ್ಕೆ ಸೀಮಿತವಾಗಿರಬಾರದು. ದೇಶದ ಎಲ್ಲಾ ಸಮುದಾಯ ಮತ್ತು ಸಮಾಜವನ್ನು ರಕ್ಷಿಸುವಂತಿರಬೇಕು. ಜತೆಗೆ ವಿವಿಧ ಭಾಷೆ, ಜನ, ಸಮುದಾಯಗಳ ಹಿತ ಕಾಯುವಂತಿರಬೇಕು. ಸಂವಿಧಾನ ಬದಲಾಗಬೇಕು ಎಂಬ  ಕೂಗು ಇತ್ತೀಚೆಗೆ ಕೇಳಿಬರುತ್ತಿದೆ. ಸಣ್ಣ ಪುಟ್ಟ ದೋಷಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಿಸುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಎಂ.ಎನ್.ರಾವ್ ಸಂವಿಧಾನದ ಅಗತ್ಯತೆ ಬಗ್ಗೆ ಚರ್ಚೆ ನಡೆಸಿದರು. ನಂತರ ಜವಾಹರಲಾಲ್‌ ನೆಹರೂ ಸಂವಿಧಾನದ ಬೇಡಿಕೆ ಇಟ್ಟರು. ಸಾರ್ವಭೌಮ ರಾಷ್ಟ್ರ ಕಟ್ಟುವ ದೃಷ್ಟಿಯಿಂದ ದೇಶಕ್ಕೆ ಸಂವಿಧಾನ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಆ ನಂತರವೇ 284 ಸದಸ್ಯರನ್ನು ಒಳಗೊಂಡ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು ಎಂದು ವಿವರಿಸಿದರು.

ಸಮಿತಿಯಲ್ಲಿ ಧಾರ್ಮಿಕ ಪಂಡಿತರು, ಕಾನೂನು ತಜ್ಞರು, ರಾಜಕೀಯ ನಾಯಕರು, ಅನುಭವಿಗಳು ಇದ್ದರು. ಇವರೆಲ್ಲರ ನಿರ್ಧಾರದಿಂದ ಸಂವಿಧಾನ ಜಾರಿಗೆ ತರಲಾಯಿತು. ದೇಶದ ಕಾನೂನು, ರಾಜಕೀಯ, ಸಾಮಾಜಿಕ ಕ್ಷೇತ್ರ ಒಳಗೊಂಡಂತೆ ಸಂವಿಧಾನ ರಚನೆಯಾಗಿದೆ. ಎಲ್ಲಾ ಭಾಷೆ, ಕುಲ, ಮತಗಳ ರಕ್ಷಣೆಯು ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು.

ಸಮಾನತೆ ಸಾಧ್ಯವಿಲ್ಲ: ಪ್ರತಿ ದೇಶಕ್ಕೂ ಸಂವಿಧಾನವಿದೆ, ಸಂವಿಧಾನವಿಲ್ಲದ ರಾಷ್ಟ್ರ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಳ್ಳುವುದಿಲ್ಲ. ಅಲ್ಲಿ ನಿರಂಕುಶ ಪ್ರಭುತ್ವ ಇರುತ್ತದೆ. ಅಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ. ಜತೆಗೆ ಅಂತಹ ದೇಶದಲ್ಲಿ ಜನ ನಿರ್ಭೀತಿಯಿಂದ ಸ್ವತಂತ್ರವಾಗಿ ಬದುಕಲು ಸಾಧ್ಯವೇ ಇಲ್ಲ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ರಾಷ್ಟ್ರದ ಹಿತಕ್ಕಾಗಿ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಇದರಿಂದ ದೇಶದ ಪ್ರತಿ ವ್ಯಕ್ತಿಯ ರಕ್ಷಣೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆಯ ಕೂಗು ಬಲವಾಗಿ ಕೇಳಿಬರುತ್ತಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.

ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್, ಅಧ್ಯಾಪಕರ ಸಂಘದ ಕಾರ್ಯದರ್ಶಿ ಗೌರಿಶಂಕರ್, ಪ್ರಾಧ್ಯಾಪಕರಾದ ಪ್ರೊ.ಸಂಪತ್ ಕುಮಾರ್, ಪ್ರೊ.ಶ್ರೀನಿವಾಸಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.