ADVERTISEMENT

ಸಯನೈಡ್ ಗುಡ್ಡದ ದೂಳಿಗೆ ಸಾಮಾನ್ಯರ ಬದುಕು ತತ್ತರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 9:23 IST
Last Updated 1 ಆಗಸ್ಟ್ 2013, 9:23 IST

ಕೆಜಿಎಫ್: ಸೊಂಯ್ ಎಂದು ಬೀಸುತ್ತಿರುವ ಆಷಾಢದ ಗಾಳಿ ರಾಬರ್ಟ್‌ಸನ್‌ಪೇಟೆ ನಗರದ ಜನತೆಯನ್ನು ಕಂಗಾಲು ಮಾಡಿದೆ.
ನಗರದ ಸಯನೈಡ್ ಗುಡ್ಡದ ಮೇಲಿಂದ ಬೀಸಿ ಬರುವ ಗಾಳಿ ತನ್ನೊಡನೆ ಸಯನೈಡ್ ಮಣ್ಣನ್ನು  ಸಹ ತರುತ್ತಿದೆ. ಕಳೆದ ಒಂದು ವಾರದಿಂದ ಗಾಳಿಯ ತೀವ್ರತೆ ಹೆಚ್ಚಾಗಿದ್ದರೂ ಬುಧವಾರ ಗಾಳಿಯ ಕಿರಿಕಿರಿ ಅಗಾಧ ಪ್ರಮಾಣದ ತೊಂದರೆಯನ್ನೂ ನಾಗರಿಕರಿಗೆ ನೀಡಿತು.

ರಾಬರ್ಟ್‌ಸನ್‌ಪೇಟೆಯ ಬೀದಿಗಳಲ್ಲಿ ಸಂಚರಿಸುವ ನಾಗರಿಕರು ಮುಖವನ್ನು ಬಟ್ಟೆಗಳಲ್ಲಿ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಒದಗಿಬಂದಿತ್ತು. ಸುಮಾರು ಒಂದೂವರೆ ಸಾವಿರ ಅಂಗಡಿಗಳಿರುವ ಎಂ.ಜಿ.ಮಾರುಕಟ್ಟೆ ದೂಳುಮಯವಾಗಿತ್ತು. ಅಂಗಡಿಗಳಲ್ಲಿ ಶೇಖರಣೆಯಾಗುವ ದೂಳನ್ನು ಒರೆಸುವುದೇ ದೊಡ್ಡ ಕಾಯಕವಾಗಿ ಪರಿಣಮಿಸಿತ್ತು.

ಇಡೀ ರಾಬರ್ಟ್‌ಸನ್‌ಪೇಟೆ ಪ್ರದೇಶ ಮಂಜು ಮುಸುಕಿದ ವಾತಾವರಣದಂತೆ ಗೋಚರವಾಯಿತು.

ಬಿಜಿಎಂಎಲ್ (ಚಿನ್ನದ ಗಣಿ)ನಿಂದ ಚಿನ್ನ ಸಂಸ್ಕರಿಸಿ ತೆಗೆದ ಮಣ್ಣಿನ ರಾಶಿ ಇರುವ ಕೆನಡೀಸ್ ಲೈನಿನ ಸಯನೈಡ್ ಗುಡ್ಡದಿಂದ ನಾಗರಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.

ನಗರದ ವಿವಿಧ ಬಡಾವಣೆಗಳಲ್ಲಿ ಇದೇ ರೀತಿಯ ಗುಡ್ಡಗಳು ಇದ್ದರೂ ಅವುಗಳ ಮೇಲೆ ಗಿಡ ಬೆಳೆಸಿರುವುದರಿಂದ ಅದು ದೂಳನ್ನು ಹೊರಸೂಸುತ್ತಿಲ್ಲ. ಆದರೆ ರಾಬರ್ಟ್‌ಸನ್‌ಪೇಟೆಯಲ್ಲಿರುವ ಸಯನೈಡ್ ಗುಡ್ಡವಿಡೀ ಬೋಳಾಗಿರುವುದರಿಂದ ಸಣ್ಣಕಣಗಳುಳ್ಳ ದೂಳು ಇಡೀ ಗುಡ್ಡವನ್ನು ಆವರಿಸಿಕೊಂಡಿದೆ. ಸಾಮಾನ್ಯವಾಗಿ ಗಾಳಿ ಕಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ಗುಡ್ಡದ ಮೂಲಕ ಹಾದು ಬರುವ ಗಾಳಿ ಪರಿಸರ ಹಾನಿಯನ್ನು ಉಂಟು ಮಾಡುತ್ತಿದೆ.

ಗುಡ್ಡದ ಮೇಲೆ ಹಸಿರನ್ನು ಉಂಟು ಮಾಡಿ ದೂಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಅದಿನ್ನೂ ಶೈಶವಾವಸ್ಥೆಯಲ್ಲಿದೆ. ಇಲಾಖೆಗಳ ನಡುವೆ ಇರುವ ಸಂಪರ್ಕ ಕೊರತೆಯಿಂದಾಗಿ ಯಾರು ಗಿಡಗಳನ್ನು ನಡೆವುದು, ಅದನ್ನು ನಿರ್ವಹಣೆ ಮಾಡುವುದು ಯಾರು, ಅದಕ್ಕಾಗಿ ಯಾವ ಇಲಾಖೆ ಎಷ್ಟು ಹಣ ಖರ್ಚು ಮಾಡಬೇಕು ಎಂಬ ಬಗ್ಗೆ ವಿವಿಧ ಇಲಾಖೆಗಳಲ್ಲಿ ಗೊಂದಲ ಇದೆ. ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಗಣಿ ಗುಡ್ಡದ ಮೇಲೆ ನೀರು ಸಿಂಪಡಿಸಿದೂಳನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ ಗಣಿ ಮುಚ್ಚಿದ ಮೇಲೆ ನಿಯಂತ್ರಣವೇ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.