ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಭೂಮಿ ತತ್ವದ ತಳಪಾಯ!

ಫೆ.12–13ರ ಸಂಭ್ರಮಕ್ಕೆ ನಡೆದಿದೆ ಭರದ ಸಿದ್ಧತೆ

ಕೆ.ನರಸಿಂಹ ಮೂರ್ತಿ
Published 1 ಫೆಬ್ರುವರಿ 2014, 7:09 IST
Last Updated 1 ಫೆಬ್ರುವರಿ 2014, 7:09 IST

ಕೋಲಾರ: ಭೂಗೋಳ, ಅದರ ಹಿನ್ನೆಲೆ­ಯಲ್ಲಿ ಭುವನೇಶ್ವರಿ ಪ್ರತಿಮೆ, ತಲೆ ಮೇಲೆ ಪ್ರಖರ ಸೂರ್ಯನ ಬಿಂಬ, ಈ ಸ್ತಬ್ಧ ಚಿತ್ರದ ಸುತ್ತಲೂ ಭೂಮಿ ತತ್ವ­ವನ್ನು ಪ್ರತಿಪಾದಿಸುವ ಕವಿ ಸಾಲುಗಳು...

–ಇದು ಫೆ.12 ಮತ್ತು 13ರಂದು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆಯುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರ­ವಣಿಗೆ ವಿಶೇಷ. ಇನ್ನೂ ವಿಶೇಷ ಎಂದರೆ ಅಧ್ಯಕ್ಷ ಡಾ.ವಿ.ಚಂದ್ರಶೇಖರ ನಂಗಲಿ ಮೆರವಣಿಗೆ ವಾಹನದಲ್ಲಿ ಕುಳಿತು ಸಾಗದೆ ಮೆರವಣಿಗೆ ಮುಂಭಾಗದಲ್ಲಿ ಜನರೊಡನೆ ನಡೆದೇ ಸಾಗಲು ನಿರ್ಧರಿ­ಸಿರುವುದು. ನಡಿಗೆಯೇ ಪೂಜೆ ಭೂಮಿ ತಾಯಿಗೆ ಎಂಬುದು ಅವರ ಮಾತು.

ಸಾಹಿತ್ಯ ಸಮ್ಮೇಳನದ ಮೆರವಣಿಗೆ ವಾಹನದಲ್ಲಿ ಸಾಲಂಕೃತವಾದ ಆಸನ­ದಲ್ಲಿ ಸಮ್ಮೇಳನದ ಅಧ್ಯಕ್ಷರು ಮತ್ತು ಅವರ ಪತ್ನಿ ಕುಳಿತು ಸಾಗುವುದು ಸಾಮಾನ್ಯ ನಡೆವಳಿಕೆ. ಆದರೆ ಈ ಬಾರಿ ಸಮ್ಮೇಳನದಲ್ಲಿ ಅಧ್ಯಕ್ಷರು ಮೆರವಣಿಗೆ ವಾಹನದಲ್ಲಿ ಕುಳಿತುಕೊಳ್ಳದೇ, ಭೂಗೋಳ ಮತ್ತು ಭುವನೇಶ್ವರಿಗೆ (ಭೂಮಿ ತಾಯಿಯ ಸಂಸ್ಕೃತ ರೂಪ) ಆದ್ಯತೆ ನೀಡಿದ್ದಾರೆ. ತಮ್ಮ ಜೀವನ ಮತ್ತು ಸಾಹಿತ್ಯವನ್ನು ರೂಪಿಸಿದ ಭೂಮಿ ತತ್ವದ ಸಂದೇಶ ಸಮ್ಮೇಳನದ ಸಂದರ್ಭ­ದಲ್ಲಿ ಸಮುದಾಯಕ್ಕೆ ರವಾನೆಯಾಗ-­ಬೇಕು ಎಂಬುದು ಅಧ್ಯಕ್ಷರ ಇಚ್ಛೆ. ಹೀಗಾಗಿ ಸಮ್ಮೇಳನ ವ್ಯಕ್ತಿ ಕೇಂದ್ರಿತ­ವಾಗದೇ ಭೂಮಿ ಮತ್ತು ಅದರ ಬಳಕೆ­ದಾರವಾದ ಸಮುದಾಯ ಕೇಂದ್ರಿತ­ವಾಗಿ ಗಮನ ಸೆಳೆಯಲಿದೆ.

ಮೆರವಣಿಗೆ ವಾಹನ ಪೀಠದ ಮೇಲೆ ಅದಕ್ಕಿಂತಲೂ ದೊಡ್ಡದಾದ ಭೂಗೋ­ಳದ ಪ್ರತಿಕೃತಿ ಇರಲಿದೆ. ಪೀಠದ ಮುಂಭಾಗ ಜನಪದ ತ್ರಿಪದಿ- ‘ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ.. ಎಳ್ಳು ಜೀರಿಗೆ ಬೆಳೆಯೋಳ, ಎದ್ದೊಂದು ಗಳಿಗೆ ನೆನೆಯೋಣ’ ಎಂಬ ಸಾಲು. ಪೀಠದ ಮತ್ತೊಂದು ಬದಿಗೆ ಕೆ.ಎಸ್‍.ನರಸಿಂಹ­ಸ್ವಾಮಿ­ಯವರ ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ಸಾಲುಗಳು, ಮೂರನೇ ಬದಿಯಲ್ಲಿ ‘ಸಮುದ್ರ ವಸನೇ ಪರ್ವತ ಸ್ತನ ಮಂಡಲೇ..ಕ್ಷಮಯಾ ಧರಿತ್ರಿ’ ಎಂಬ ಸಂಸ್ಕೃತ ಶ್ಲೋಕ-ದ ಕನ್ನಡ ರೂಪದ ಸಾಲುಗಳು ಎದ್ದು ಕಾಣಲಿವೆ.

ವಾಹನದ ಸುತ್ತಲೂ, ‘ಕೆರೆ ಕಟ್ಟೆ ಉಳಿಸಿ’, ‘ರಾಜಕಾಲುವೆ ಉಳಿಸಿ’. ‘ಮರಳು ಉಳಿಸಿ’. ‘ಗೋಕುಂಟೆ ಉಳಿಸಿ’ ಎಂಬ ಘೋಷಣಾ ವಾಕ್ಯಗಳನ್ನು ಪ್ರದ­ರ್ಶಿಸಲಾಗುವುದು.

ಇಂಥದ್ದನ್ನು ಇದುವರೆಗೂ ಆಳ್ವಾಸ್‍ ನುಡಿಸಿರಿಯಲ್ಲಾಗಲೀ ಸಾಹಿತ್ಯ ಸಮ್ಮೇ­ಳನದಲ್ಲಾಗಲೀ ಮಾಡಿಲ್ಲ. ಒಟ್ಟಾರೆ ಮೆರವಣಿಗೆ ಭೂಮಿ ತತ್ವದ ಪ್ರತೀಕವನ್ನು ಪ್ರತಿಬಿಂಬಿಸಲಿದೆ. ಅವರ ಕಲ್ಪನೆಗೆ ಕಿವಿ ಮತ್ತು -ಮನಸ್ಸು ಕೊಟ್ಟ ಕಲಾವಿದ ಕೆ.ವಿ.ಕಾಳಿದಾಸ್‍ ಸ್ತಬ್ಧ ಚಿತ್ರವನ್ನು ರೂಪಿ­ಸುವ ಸಿದ್ಧತೆಯನ್ನು ಆರಂಭಿಸಿದ್ದಾರೆ.

ಸ್ಮರಣಿಕೆ: ಸಮ್ಮೇಳನದಲ್ಲಿ ಪಾಲ್ಗೊ­ಳ್ಳುವ ವಿಷಯ ತಜ್ಞರು ಮತ್ತು ಗಣ್ಯರಿಗೆ ಭೂಮಿ ತತ್ವವನ್ನು ಆಧರಿಸಿದ ಸಮ್ಮೇ­ಳನದ ಮೆರವಣಿಗೆಯ ಸ್ತಬ್ಧ­ಚಿತ್ರವನ್ನೇ ಹೋಲುವ ಸ್ಮರಣಿಕೆಗಳನ್ನು  ನೀಡಲು ಉದ್ದೇಶಿಸಿರುವುದು ವಿಶೇಷ.

ಇನ್ನಷ್ಟು ವಿಶೇಷ: ಸಮ್ಮೇಳನ ಸಾಂಪ್ರ­ದಾಯಿಕ ಸ್ವರೂಪದ ಚೌಕಟ್ಟುಗಳನ್ನು ಮೀರಿ ಇನ್ನಷ್ಟು ವಿಶೇಷಗಳನ್ನು ಒಳ­ಗೊಳ್ಳಲಿದೆ.
ಇದೇ ಮೊದಲ ಬಾರಿಗೆ ಮಕ್ಕಳ ಕವಿಗೋಷ್ಠಿಯೊಂದನ್ನು ಆಯೋಜಿಸ­ಲಾಗುತ್ತಿದೆ. ವಿಜ್ಞಾನ ಮತ್ತು ಆಹಾರ ಕುರಿತ ಗೋಷ್ಠಿಗಳೂ ನಡೆಯಲಿವೆ. ಜಿಲ್ಲೆಯ ಮಟ್ಟಿಗೆ ಇದುವರೆಗಿನ ಸಮ್ಮೇ­ಳನದಲ್ಲಿ ಕಾಣ ಕವಿ ---ಕಾವ್ಯ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸರ್ವಜ್ಞನ ಸಾಹಿತ್ಯದಲ್ಲಿ ಆಹಾರ ಪರಿಕಲ್ಪನೆ ಕುರಿತು ಆಹಾರ ತಜ್ಞ ಡಾ.ರಾಜ­ಶೇಖರ್ ಉಪ­ನ್ಯಾಸ ನೀಡಲಿದ್ದಾರೆ. ವಿಜ್ಞಾನ ಲೇಖಕ­ರಾದ ನಾಗೇಶ ಹೆಗಡೆ, ಡಾ.ಶೈಲಜಾ ಕೂಡ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.­ನಾಗರಾಜ್‍ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಐದು ದ್ವಾರ:  ಸಮ್ಮೇಳನ ನಡೆಯುವ ಟಿ.ಚೆನ್ನಯ್ಯ ರಂಗಮಂದಿರದ ಸುತ್ತ­ಮುತ್ತ ಜಿಲ್ಲೆಯ ಪ್ರಮುಖ ಲೇಖಕರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸ­ಲಾಗುವುದು. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಉತ್ತನೂರು ರಾಜಮ್ಮ ವಿ ಶೆಟ್ಟಿ, ಸೋಮಶೇಖರಗೌಡ, ಡಾ.­ಡಿ.ವಿ.ಗುಂಡಪ್ಪ ಹಾಗೂ ಬಂಗಾರ­ಪೇಟೆಯಲ್ಲಿ ನಡೆದ ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅ.ನ.ಕೃಷ್ಣರಾಯರ ಹೆಸರಿನ ದ್ವಾರ­ಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನೆರವು ದೊರಕಿಲ್ಲ: ಸುಮಾರು ₨ 12 ಲಕ್ಷ ಅಂದಾಜು ವೆಚ್ಚದಲ್ಲಿ ಸಮ್ಮೇಳನ­ವನ್ನು ಸಂಘಟಿಸಲಾಗುತ್ತಿದೆ. ಪರಿಷತ್ ಕೇಂದ್ರ ಘಟಕ ಈ ಮುಂಚಿನಂತೆ ₨ 5 ಲಕ್ಷ ನೀಡುವ ಬದಲು ₨ 4.50 ಲಕ್ಷ­ವನ್ನಷ್ಟೇ ನೀಡಿದೆ. ಕಳೆದ ಸಮ್ಮೇಳನ­ದಲ್ಲಿ ಮಾಲೂರು ಪುರಸಭೆ ₨ 1 ಲಕ್ಷ ನೀಡಿತ್ತು. ಆದರೆ ಈ ಬಾರಿ ಜಿಲ್ಲಾಡ­ಳಿತದಿಂದ ಇನ್ನೂ ನೆರವು ದೊರಕಿಲ್ಲ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.